ಜಲಂಧರ್: ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಅನೇಕ ವಿದ್ಯಾರ್ಥಿಗಳ ಕನಸಿಗೆ ಕೆಲವೊಮ್ಮೆ ಭ್ರಮನಿರಸನವಾಗುವ ಘಟನೆಗಳು ನಡೆಯುತ್ತವೆ. ವಿದೇಶಿಗಳ ನೀತಿ ನಿಯಮ ತಿಳಿಯದೇ, ಮಧ್ಯವರ್ತಿಗಳ ವಂಚನೆ, ಸರಿಯಾದ ದಾಖಲಾತಿ ಪಡೆಯದೇ ಅಲ್ಲಿಗೆ ಹೋಗಿ ಅತಂತ್ರರಾಗುವ ಕುರಿತು ವರದಿ ಆಗುತ್ತಲೇ ಇರುತ್ತವೆ. ಅಂತಹುದ್ದೇ ಮತ್ತೊಂದು ಘಟನೆ ನಡೆದಿದೆ.
ಕೆನಡಾದ ಒಂಟಾರಿಯೊದ ಟೊರೊಂಟೊದಲ್ಲಿರುವ ಹಂಬರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವ ಸಂಬಂಧ ಅವರಿಗೆ ಪತ್ರ ನೀಡಲಾಗಿದೆ. ಇದಕ್ಕೆ ಕಾರಣ ನಕಲಿ ದಾಖಲೆ ಮತ್ತು ಪ್ರಮಾಣ ಪತ್ರ. ಜಲಂಧರ್ನ ಟ್ರಾವೆಲ್ ಏಜೆಂಟ್ 16 ರಿಂದ 20 ಲಕ್ಷ ಪಡೆದು, ನಕಲಿ ದಾಖಲೆ ಮತ್ತು ಪ್ರಮಾಣಪತ್ರ ಸೃಷ್ಟಿಸಿ ಈ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಿದ್ದ. ಆದರೆ, ಇದೀಗ ಅದನ್ನು ಅರಿತ ಅಲ್ಲಿನ ಕಾಲೇಜು ಮತ್ತು ಸರ್ಕಾರ ಆ ವಿದ್ಯಾರ್ಥಿಗಳು ಕೆನಡಾದಿಂದ ಭಾರತಕ್ಕೆ ಮರಳುವಂತೆ ಸೂಚಿಸಿದೆ.
ಇನ್ನು ಈ ಬಗ್ಗೆ ಟ್ರಾವೆಲ್ ಏಜೆಂಟ್ ವಿಚಾರಿಸಲು ಮುಂದಾದಾಗ ಆತ ಕಚೇರಿ ಮುಚ್ಚಿ ಆರು ತಿಂಗಳಾಗಿದೆ ಎಂಬ ಸತ್ಯ ಬಯಲಾಗಿದ್ದು, ಅಮಾಯಕ ವಿದ್ಯಾರ್ಥಿಗಳನ್ನು ವಂಚಿಸಿ, ಆತನ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಮಾಹಿತಿ ನೀಡಿರುವ ಡಿಸಿಪಿ ವತ್ಸಲಾ ಗುಪ್ತಾ, ಜಲಂಧರ್ನ ಗ್ರೀನ್ ಪಾರ್ಕ್ನಲ್ಲಿ ಟ್ರಾವೆಲ್ ಏಜೆಂಟ್ ಇಮಿಗ್ರೇಷನ್ ಕೆಲಸ ಮಾಡುತ್ತಿದ್ದ ಬಗ್ಗೆ ವರದಿಗಳು ಬಂದಿತ್ತು. ಇದೀಗ ಆತ ಕಳುಹಿಸಿದ ಸುಮಾರು 700 ವಿದ್ಯಾರ್ಥಿಗಳಿಗೆ ಗಡಿಪಾರು ಆದೇಶ ಬಂದಿದೆ. ಈ ಪ್ರಕರಣ ಸಂಬಂದ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಆದರೂ, ಈ ಸಂಬಂಧ ಪ್ರಕರಣ ತನಿಖೆಗೆ ಮುಂದಾಗಿದ್ದೇವೆ ಎಂದಿದ್ದಾರೆ.