ಇಸ್ಲಾಮಾಬಾದ್ :ಪಾಕಿಸ್ತಾನದಲ್ಲಿನ ಅಸಹಿಷ್ಣು, ಮತಾಂಧ ಜನರು ಅಲ್ಪಸಂಖ್ಯಾತರ ಮೇಲಿನ ಮತಾಂಧ ವರ್ತನೆ ದೇಶವನ್ನು ಕಳಪೆಯಾಗಿ ಚಿತ್ರಿಸುತ್ತದೆ ಎಂಬುದಾಗಿ ಅಲ್ಲಿನ ಕೋರ್ಟ್ ಹೇಳಿದೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ತಮ್ಮ ಪ್ರಾರ್ಥನಾ ಸ್ಥಳವನ್ನು ಮಸೀದಿಯನ್ನಾಗಿ ರೂಪಿಸಿ ಅದರ ಒಳಗೋಡೆಗಳಲ್ಲಿ ಇಸ್ಲಾಮಿಕ್ ಚಿಹ್ನೆಗಳನ್ನು ಪ್ರದರ್ಶಿಸಿದ್ದಾರೆ ಎಂಬ ಆರೋಪದ ಮೇಲೆ ಅಹ್ಮದೀಯ ಸಮುದಾಯದ ಸದಸ್ಯರ ವಿರುದ್ಧದ ಧರ್ಮನಿಂದೆಯ ಆರೋಪವನ್ನು ಅಂಗೀಕರಿಸಿದ ಲಾಹೋರ್ ಹೈಕೋರ್ಟ್ನ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ನಮ್ಮ ದೇಶದ ಮುಸ್ಲಿಮೇತರನೊಬ್ಬ (ಅಲ್ಪಸಂಖ್ಯಾತ) ಧಾರ್ಮಿಕ ನಂಬಿಕೆಗಳನ್ನು ಹೊಂದುವುದರಿಂದ, ಅವನ ಧರ್ಮವನ್ನು ಪ್ರತಿಪಾದಿಸುವುದನ್ನು ಮತ್ತು ಅವನ ಆರಾಧನಾ ಸ್ಥಳದ ನಾಲ್ಕು ಗೋಡೆಯೊಳಗೆ ಆಚರಣೆ ಮಾಡುವುದನ್ನು ತಡೆಯುವುದು ನಮ್ಮ ಪ್ರಜಾಪ್ರಭುತ್ವದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಒಂಬತ್ತು ಪುಟಗಳ ತೀರ್ಪು ಹೇಳಿದೆ. ಅಹ್ಮದಿ ವ್ಯಕ್ತಿಗಳ ಮೇಲಿನ ಧರ್ಮನಿಂದೆಯ ಅಪರಾಧದ ವಿರುದ್ಧದ ಅರ್ಜಿಯನ್ನು ವಿಚಾರಣೆ ನಡೆಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿ ಸೈಯದ್ ಮನ್ಸೂರ್ ಅಲಿ ಶಾ ಅವರು ಈ ತೀರ್ಪು ನೀಡಿದ್ದಾರೆ.