ಜಮ್ಮು (ಜಮ್ಮು ಮತ್ತು ಕಾಶ್ಮೀರ): ಒಂದು ಕಾಲದಲ್ಲಿ 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸಿದ ಕೇಂದ್ರದ ಕ್ರಮವನ್ನು ಬೆಂಬಲಿಸಿದವರು ಕೂಡಾ ಈಗ ಹತಾಶೆಯ ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
2019 ರ ಆಗಸ್ಟ್ 5 ರಂದು ರಾಜ್ಯತ್ವವನ್ನು ತೆಗೆದುಹಾಕಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವಾಗ, ಈ ಕ್ರಮವು ಈ ಪ್ರದೇಶದ ಪ್ರಚಂಡ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಎನ್ಡಿಎ ಸರ್ಕಾರ ಹೇಳಿಕೊಂಡಿತ್ತು. ಇದಾಗಿ ಒಂದು ವರ್ಷದ ನಂತರ, 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸುವ ಕೇಂದ್ರದ ಕ್ರಮವನ್ನು ಬೆಂಬಲಿಸಿದವರು ಸೇರಿದಂತೆ ಇಲ್ಲಿನ ಭಾಗಶಃ ಎಲ್ಲ ಜನರು ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಧಿಗಳು ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ - ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಅಂದು ಮೋದಿ ಸರ್ಕಾರ ವಾದಿಸಿತ್ತು. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಲಡಾಖ್ ಮತ್ತು ಜಮ್ಮು ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು. ತನ್ನ ಕ್ರಮವನ್ನು ಸಮರ್ಥಿಸಿದ ಸರ್ಕಾರ, ಹಿಂಸಾಚಾರ ಪೀಡಿತ ಕಣಿವೆ ನಾಡಿನಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಈ ಕ್ರಮವು ಸಹಾಯ ಮಾಡುತ್ತದೆ ಎಂದು ಅದು ಹೇಳಿತ್ತು.
ಹೊಸದಾಗಿ ರಚಿಲಾಸಲಾದ ಕೇಂದ್ರಾಡಳಿತ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಹಂಚಿಕೆ ಅಂಕಿ - ಅಂಶಗಳು ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ. ಮೋದಿ ಸರ್ಕಾರ 2020 - 21ರ ಬಜೆಟ್ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ 30,757 ಕೋಟಿ ಮತ್ತು ಲಡಾಖ್ಗೆ 5,958 ಕೋಟಿ ರೂ. ಹಂಚಿಕೆ ಮಾಡಿದೆ. ಇದು ಇಲ್ಲಿನ ಆರ್ಥಿಕ ಅಭಿವೃದ್ಧಿಗೆ ಅತ್ಯಲ್ಪ ಮೊತ್ತ ಎಂದು ಹೆಚ್ಚಿನ ವಿಶ್ಲೇಷಕರು ಹೇಳುತ್ತಾರೆ. ಹೀಗಾಗಿ ಈ ಪ್ರದೇಶಗಳ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಭರವಸೆಯನ್ನು ಈಡೇರಿಸುವಲ್ಲಿ ಕೇಂದ್ರವು ಗಂಭೀರವಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
ಜಮ್ಮು ಪ್ರದೇಶದ ಜನರ ಒಟ್ಟಾರೆ ಅನಿಸಿಕೆ ಏನೆಂದರೆ, ಆ ಸಮಯದಲ್ಲಿ ಸರ್ಕಾರವು ಭರವಸೆ ನೀಡಿದಂತೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಏರಿಕೆಯಾಗುವ ಬದಲು, ಇಳಿಕೆಯಾಗಿದೆ. ಮತ್ತೊಂದೆಡೆ ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮರುಸಂಘಟನೆಯು ಸಾಮಾನ್ಯ ಜನರಿಗೆ ದುಃಖವನ್ನು ಹೆಚ್ಚಿಸಿದ್ದು, ಆ ಮೊದಲು ಇದಕ್ಕಿಂತ ಹೆಚ್ಚು ನೆಮ್ಮದಿಯಿಂದ ಇದ್ದೆವು ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.
ಆರ್ಟಿಕಲ್ 370 ಮತ್ತು 35 ಎ ರದ್ದುಗೊಳಿಸುವಿಕೆಯು ಈ ಸ್ಥಳಕ್ಕೆ ಆರ್ಥಿಕ ಸಂಕಷ್ಟವನ್ನು ತಂದಿಟ್ಟಿದೆ. ಈ ಕ್ರಮವು ಇಲ್ಲಿನ ಜನರ ಜೀವನಕ್ಕೆ ಸಮೃದ್ಧಿಯನ್ನು ತರುತ್ತದೆ ಎಂದು ಬಿಜೆಪಿ ಸರ್ಕಾರ ಜಮ್ಮು ಜನರಿಗೆ ಭರವಸೆ ನೀಡಿತ್ತು. ಆದರೆ ಈಗ ನಮ್ಮ ಕೆಟ್ಟ ಪರಿಸ್ಥಿತಿಯನ್ನು ನಾವು ನೋಡಬಹುದು. ಅಂದಿನಿಂದ ಇಂದಿನವರೆಗೂ ನಿರುದ್ಯೋಗ ಪ್ರಮಾಣ ಅಗಾಧವಾಗಿ ಏರಿದೆ. ಉಜ್ವಲ ಭವಿಷ್ಯದ ಕನಸುಗಳು ಹೊತ್ತಿದ್ದ ನಾವು ಕೇವಲ ಭ್ರಮೆಯಲ್ಲೇ ಬದುಕುತ್ತಿದ್ದೇವೆ. ಸರ್ಕಾರವು ಹೊರಗಿನವರಿಗೆ ನಿವಾಸದ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಅವರನ್ನು ಸಂತೋಷಪಡಿಸುತ್ತದೆ. ಆದರೆ ಜಮ್ಮುವಿನ ಮೂಲ ನಿವಾಸಿಗಳಿಗೆ ಸಂಬಂಧಪಟ್ಟಂತೆ ಸರ್ಕಾರ ಏನೂ ಮಾಡಿಲ್ಲ. ಇಲ್ಲಿನ ಜನ ಇನ್ನೂ ಶೋಚನೀಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ಇಲ್ಲಿನ ಯುವಕ ಮೋಹಿಂದರ್ ಜೀತ್ ಸಿಂಗ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.