ಚೆನ್ನೈ: ಮಹಾರಾಷ್ಟ್ರದಲ್ಲಿ ಕಂಗನಾ ರಣಾವತ್ ಹಾಗೂ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಇದರ ಮಧ್ಯೆ ತಮಿಳು ನಟ ವಿಶಾಲ್ ಕಂಗನಾ ರಣಾವತ್ ಪರ ಬ್ಯಾಟ್ ಬೀಸಿದ್ದಾರೆ.
ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್. ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಹೇಳಲು ನೀವು ಎಂದಿಗೂ ಎರಡು ಸಲ ಯೋಚಿಸಿಲ್ಲ. ಇದು ನಿಮ್ಮ ವೈಯಕ್ತಿಕ ಸಮಸ್ಯೆಯಲ್ಲ. ಸರ್ಕಾರದಿಂದ ತೊಂದರೆ ಎದುರಿಸುತ್ತಿದ್ದಾಗ ಕೂಡ ನೀವೂ ಧೈರ್ಯವಾಗಿದ್ದೀರಿ. 1920ರಲ್ಲಿ ಭಗತ್ ಸಿಂಗ್ ಮಾಡಿದಂತೆಯೇ ನೀವೂ ಮಾಡುತ್ತಿದ್ದೀರಿ ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
ಸರ್ಕಾರ ನಡೆದುಕೊಳ್ಳುವ ರೀತಿ ಸರಿಯಾಗಿಲ್ಲ ಎಂದು ಗೊತ್ತಾದರೆ ಅದರ ವಿರುದ್ಧ ಜನರು ಮಾತನಾಡಲು ಇದೊಂದು ಉದಾಹರಣೆಯಾಗಿದೆ. ನಿಮಗೆ ನಾನು ನಮಸ್ಕರಿಸುತ್ತೇನೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ಸದ್ಯ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಆಧಾರಿತ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ.
ಮುಂಬೈ ಈಗ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ನಟಿ ಕಂಗನಾ ರಣಾವತ್ ಟ್ವೀಟ್ ಮಾಡುತ್ತಿದ್ದಂತೆ ಮಹಾರಾಷ್ಟ್ರ ಆಡಳಿತರೂಢ ಪಕ್ಷ ಅವರ ಮೇಲೆ ಟೀಕಾ ಪ್ರಹಾರ ನಡೆಸುತ್ತಿದೆ. ಜತೆಗೆ ಅವರ ಕಚೇರಿ ಕೂಡ ಧ್ವಂಸ ಮಾಡಲಾಗಿದೆ. ಈಗಾಗಲೇ ಕೇಂದ್ರ ಸಚಿವ ರಾಮದಾಸ್ ಅಟ್ಟವಾಲೆ ಅವರ ನಿವಾಸಕ್ಕೆ ಭೇಟಿ ನೀಡಿ, ಮಾಹಿತಿ ಸಹ ಪಡೆದುಕೊಂಡಿದ್ದಾರೆ.