ಕರ್ನಾಟಕ

karnataka

By

Published : Nov 13, 2019, 3:15 PM IST

ETV Bharat / bharat

ನಾಳೆ ಮೂರು ಮಹತ್ವದ ಪ್ರಕರಣಗಳ ತೀರ್ಪು ಪ್ರಕಟಿಸಲಿದೆ ಸರ್ವೋಚ್ಛ ನ್ಯಾಯಾಲಯ

ಕೆಲ ದಿನಗಳ ಹಿಂದೆ ಅಯೋಧ್ಯೆ ವಿವಾದಕ್ಕೆ ಪೂರ್ಣವಿರಾಮ ನೀಡಿದ ದೇಶದ ಉನ್ನತ ನ್ಯಾಯಾಲಯ, ಇಂದು ಅನರ್ಹ ಶಾಸಕರ ಕುರಿತ ಅಂತಿಮ ತೀರ್ಪು ಪ್ರಕಟಿಸಿತು. ಇದರೊಂದಿಗೆ ನಾಳೆ ದೇಶದ ಮೂರು ಪ್ರಮುಖ ಪ್ರಕರಣಗಳ ತೀರ್ಪನ್ನೂ ಸರ್ವೋಚ್ಛ ನ್ಯಾಯಾಲಯ ಪ್ರಕಟಿಸಲಿದೆ.

SC

ನವದೆಹಲಿ:ಸುಪ್ರೀಂ ಕೋರ್ಟ್​ ನಾಳೆ ಪ್ರಮುಖ ಮೂರು ತೀರ್ಪು ಪ್ರಕಟಿಸಲು ಸನ್ನದ್ಧವಾಗಿದೆ.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ, ರಫೇಲ್​ ಹಗರಣ ಹಾಗೂ ರಾಹುಲ್​ ಗಾಂಧಿ ವಿರುದ್ಧ ಸಲ್ಲಿಸಲಾದ ಅರ್ಜಿ ಸಂಬಂಧ ಅಂತಿಮ ತೀರ್ಪು ನಾಳೆ ಪ್ರಕಟವಾಗಲಿದೆ.

1.ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಪ್ರಕರಣ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಡಿಸೆಂಬರ್ 14, 2018ರಂದು ಸುಪ್ರೀಂ ನೀಡಿದ್ದ ತೀರ್ಪಿನ ಮೇಲೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿ ಕುರಿತಂತೆ ನಾಳೆ ತೀರ್ಪು ಪ್ರಕಟವಾಗಲಿದೆ.

2.ರಫೇಲ್ ಯುದ್ಧವಿಮಾನಗಳ ಖರೀದಿ ಹಗರಣ

36 ರಫೇಲ್ ಯುದ್ಧವಿಮಾನಗಳ ಖರೀದಿಗೆ ಪ್ರಕರಣದಲ್ಲಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ ಪರಿಣಾಮ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆದಿದ್ದು ನಾಳೆ ಅಂತಿಮ ತೀರ್ಪು ಹೊರಬರಲಿದೆ.

ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ತಯಾರಿಸಿದ ರಫೇಲ್​ ಯುದ್ಧ ವಿಮಾನಗಳ ಖರೀದಿಗೆ ಭಾರತ ಸರ್ಕಾರ 59,000 ಕೋಟಿ ರೂ.ಗಳ ಒಪ್ಪಂದ ಮಾಡಿರುವ ಕುರಿತು ಮೇಲ್ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಎಲ್ಲಾ 3 ಅರ್ಜಿಗಳನ್ನು ಸುಪ್ರೀಂ ಕೋರ್ಟ್​ 2018 ರ ಡಿಸೆಂಬರ್ 14 ರಂದು ವಜಾಗೊಳಿಸಿತ್ತು.

ಆದರೆ ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ ಹಾಗೂ ವಕೀಲರಾದ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗಾಗಿ ಮತ್ತೆ ಕೋರ್ಟ್​ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಕೋರ್ಟ್​ ನಾಳೆ ಅಂತಿಮ ತೀರ್ಪು ಪ್ರಕಟಿಸಲಿದೆ.

3. 'ಚೌಕಿದಾರ್ ಚೋರ್ ಹೈ' ಪ್ರಕರಣ

ಇನ್ನೊಂದೆಡೆ ರಫೇಲ್ ಯುದ್ಧವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಹೇಳಿರುವ "ಚೌಕಿದಾರ್ ಚೋರ್ ಹೈ" ಹೇಳಿಕೆ ಸಂಬಂಧಿಸಿದಂತೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಲೇಖಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್​ ರೋಹ್ಟಗಿ, ಸಾರ್ವಜನಿಕ ಭಾಷಣದಲ್ಲಿ ಮೋದಿ ವಿರುದ್ಧ ತಪ್ಪು ಸಂದೇಶ ರವಾನಿಸಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಕೋರ್ಟ್​ ಗಮನಕ್ಕೆ ತಂದಿದ್ದರು.

ರಾಹುಲ್​ ಪರ ವಕೀಲರಾದ ಅಭಿಷೇಕ್​ ಮನು ಸಿಂಘ್ವಿ, ಈ ವಿಚಾರವಾಗಿ ರಾಹುಲ್​ ಗಾಂಧಿ ತಪ್ಪೊಪ್ಪಿಕೊಂಡಿದ್ದಾರೆ. ಆದರೂ ಕೋರ್ಟ್​ ನೋಟಿಸ್​ ಜಾರಿಗೊಳಿಸಿದೆ ಎಂದು ವಾದಿಸಿದ್ದರು. ಇದನ್ನು ಅಲ್ಲಗಳೆದ ನ್ಯಾಯಾಲಯ, ತಪ್ಪೊಪ್ಪಿಗೆ ಮತ್ತು ಕ್ಷಮೆ ಒಂದೇ ಅಲ್ಲ ಎಂದು ಪ್ರತಿಪಾದಿಸಿತ್ತು.

ಹೀಗಾಗಿ ರಾಹುಲ್​ ಗಾಂಧಿ ನೀಡಿದ ಕ್ಷಮೆಯಾಚನೆಯನ್ನು ಸ್ವೀಕರಿಸದೆ, ಕಾನೂನಿನ ಪ್ರಕಾರ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೋಹ್ಟಗಿ ವಾದಿಸಿದ್ದರು. ಈ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ತೀರ್ಪನ್ನು ನಾಳೆ ಪ್ರಕಟಿಸಲಿದೆ.

ABOUT THE AUTHOR

...view details