ನವದೆಹಲಿ: ಮೋದಿ 2.0 ಸರ್ಕಾರ ರಚನೆಯಾದ ಬಳಿಕ ಬಿಜೆಪಿಯ ಮೊದಲ ಸಂಸದೀಯ ಪಕ್ಷದ ಸಭೆ ನಡೆಯುತ್ತಿದೆ. ಪಕ್ಷದ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಇಂದಿನ ಸಭೆಯಲ್ಲಿ ಪ್ರಧಾನಿ ಮೋದಿ, ಪಕ್ಷದ ಸಂಸದರಿಗೆ ಅಧಿವೇಶನದ ವೇಳೆ ಹಾಜರಿರುವ, ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಬಗ್ಗೆ ನಿರ್ದೇಶನ ನೀಡಲಿದ್ದಾರೆ. ಸರ್ಕಾರ ವಿವಿಧ ಯೋಜನೆಗಳ ಕುರಿತಾಗಿ ಜನರಿಗೆ ಸಮರ್ಪಕ ಸಂವಹನ ನಡೆಸುವಂತೆಯೂ ಮೋದಿ ಸೂಚನೆ ನೀಡಲಿದ್ದಾರೆ.
ಇನ್ನು ಇದೇ ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದು, ಈ ಬಗ್ಗೆ ಸಹ ಮಹತ್ವದ ಚರ್ಚೆ ನಡೆಸಲಿದ್ದಾರೆ. ಜತೆಗೆ ಭಾರತೀಯ ವೈದ್ಯಕೀಯ ಕೌನ್ಸಿಲ್ (ತಿದ್ದುಪಡಿ) ವಿಧೇಯಕ 2019 ಹಾಗೂ ಆಧಾರ್ ಮತ್ತಿತರ ಕಾನೂನು (ತಿದ್ದುಪಡಿ) ವಿಧೇಯಕದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
ಅಧಿವೇಶನದ ವೇಳೆ ಪ್ರತಿ ಮಂಗಳವಾರ ಸಂಸದೀಯ ಪಕ್ಷದ ಸಭೆ ನಡೆಯಲಿದ್ದು, ಕಳೆದ ವಾರ ರಾಜಸ್ಥಾನದ ಬಿಜೆಪಿ ನಾಯಕ ಮದನ್ ಲಾಲ್ ಶೈನಿ ನಿಧನದಿಂದ ರದ್ದಾಗಿತ್ತು. ಅಲ್ಲದೆ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಶಿ ಅವರ ಅನುಪಸ್ಥಿತಿಯಲ್ಲಿ ಪಕ್ಷದ ಮೊದಲ ಸಂಸದೀಯ ಸಭೆ ನಡೆಯುತ್ತಿದೆ.