ಚೆನ್ನೈ:ತಮ್ಮ ಒಡೆತದನ ಕಲ್ಯಾಣ ಮಂಟಪದ ಆಸ್ತಿ ತೆರಿಗೆ ವಿಚಾರವಾಗಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಸೂಪರ್ ಸ್ಟಾರ್ ರಜನಿಕಾಂತ್ಗೆ ಹಿನ್ನಡೆಯಾಗಿದ್ದು, ಈ ಮೂಲಕ ತೀವ್ರ ಮುಜುಗರ ಅನುಭವಿಸಿದ್ದಾರೆ.
ಶ್ರೀ ರಾಘವೇಂದ್ರ ಹೆಸರಿನ ಕಲ್ಯಾಣ ಮಂಟಪದ 6.50 ಲಕ್ಷ ರೂ. ತೆರಿಗೆ ಕಟ್ಟುವಂತೆ ಚೆನ್ನೈ ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಇದನ್ನ ಪ್ರಶ್ನೆ ಮಾಡಿ ರಜನಿಕಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್, ಇದು ಸಮಯ ಹಾಳುಮಾಡುವಂತಹದ್ದು, ಬೇಗ ತೆರಿಗೆ ಕಟ್ಟುವಂತೆ ಆದೇಶ ನೀಡಿದೆ. ಇದರಲ್ಲಿ ವಿಳಂಬ ಮಾಡಿದ್ರೆ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಹೀಗಾಗಿ ನಟ ದಂಡ ಸಹಿತವಾಗಿ ತೆರಿಗೆ ಪಾವತಿ ಮಾಡಿದ್ದಾಗಿ ತಿಳಿದು ಬಂದಿದೆ.
ಏನಿದು ವಿವಾದ!?
ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ರಜನಿಕಾಂತ್ ಒಡೆತದನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕಳೆದ 8 ತಿಂಗಳಿಂದ ಯಾವುದೇ ಮದುವೆ ಕಾರ್ಯಕ್ರಮ ನಡೆದಿಲ್ಲ. ಇದರ ಮಧ್ಯೆ ಚೆನ್ನೈ ಮಹಾನಗರ ಪಾಲಿಕೆ 6.50 ಲಕ್ಷ ರೂ ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿತ್ತು. ಇದನ್ನ ಪ್ರಶ್ನೆ ಮಾಡಿ ರಜನಿ ಪರ ವಕೀಲರು ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಜತೆಗೆ ನಾವು ಫೆಬ್ರವರಿ ತಿಂಗಳವರೆಗೆ ತೆರಿಗೆ ಪಾವತಿ ಮಾಡಿದ್ದು, ತದನಂತರ ನಮಗೆ ಯಾವುದೇ ಲಾಭ ಬರದ ಕಾರಣ ತೆರಿಗೆ ಕಟ್ಟಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ವಜಾಗೊಂಡಿದ್ದು, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ರೆ ದಂಡ ವಿಧಿಸಲಾಗುವುದು ಎಂದಿದೆ.
ಇದೇ ವಿಚಾರವಾಗಿ ಟ್ವೀಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಅನುಭವ ಎಂಬುದು ಪಾಠವಿದ್ದಂತೆ ಎಂದಿದ್ದಾರೆ.