ಹೊಸದಿಲ್ಲಿ: ಕೋವಿಡ್-19 ನಿಂದಾಗಿ ಅಥವಾ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಪ್ರಾಣ ಕಳೆದುಕೊಳ್ಳುವ ಆರೋಗ್ಯ ಸೇವಾ ಸಿಬ್ಬಂದಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ವಿಮಾ ಯೋಜನೆಯಡಿ ವಿಮಾ ಸುರಕ್ಷೆ ನೀಡಲಾಗುವುದು ಎಂದು ಕೇಂದ್ರದ ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ. ಯೋಜನೆಯ ಜಾರಿಯಿಂದಾಗಿ ದೇಶದ 22.12 ಲಕ್ಷ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಹಾಗೂ ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ.ಗಳವರೆಗೆ ವಿಮಾ ಸುರಕ್ಷೆ ದೊರಕಲಿದೆ.
ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ, ನಿವೃತ್ತ ಸಿಬ್ಬಂದಿ, ಸ್ವಯಂ ಸೇವಾ ಕಾರ್ಯಕರ್ತರು, ಗುತ್ತಿಗೆ ಕೆಲಸಗಾರರು, ದಿನಗೂಲಿ ನೌಕರರು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮತ್ತು ಸ್ವಾಯತ್ತ ಆರೋಗ್ಯ ಸೇವಾ ಸಂಸ್ಥೆಗಳು ಹೊರಗುತ್ತಿಗೆ ಪಡೆದುಕೊಂಡ ಕಾರ್ಮಿಕರಿಗೂ ವಿಮಾ ಸೌಲಭ್ಯ ಸಿಗಲಿದೆ. ಕೋವಿಡ್ನಿಂದ ಮೃತರಾಗುವ ಮತ್ತು ಕೋವಿಡ್ ಸಂಬಂಧಿತ ಕರ್ತವ್ಯದಲ್ಲಿ ನಿರತರಾಗಿರುವಾಗ ಮೃತರಾಗುವ ಎರಡೂ ವರ್ಗದವರಿಗೆ ವಿಮಾ ಸುರಕ್ಷೆಯ ಲಾಭ ದೊರಕಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.