ಕೋಲ್ಕತ್ತಾ:ನೆರೆಯ ರಾಷ್ಟ್ರಗಳ ನಡುವಿನ ಸಂಬಂಧವು 'ಉತ್ತಮವಾದ ಹಂತ'ಕ್ಕೆ ಬಂದು ತಲುಪಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಸನ್ ವೀಡಾಂಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾದಲ್ಲಿ ಚೀನೀ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಏಷ್ಯಾ ಖಂಡದ ಎರಡು ಪ್ರಬಲ ರಾಷ್ಟ್ರಗಳು ಒಟ್ಟಿಗೆ ಸಾಗುತ್ತಿರುವುದು ಆಶಾದಾಯಕವಾದ ಬೆಳವಣಿಗೆ. ಆನೆ ಮತ್ತು ಡ್ರ್ಯಾಗನ್ ಈಗ ಒಟ್ಟಿಗೆ ನೃತ್ಯ ಮಾಡಬಹುದೆಂದು ಅವರು ಆಶಿಸಿದರು.
ಪರಸ್ಪರ ಒಡಂಬಡಿಕೆ ಮತ್ತು ಸ್ನೇಹ ಸಂಬಂಧವನ್ನು ವೃದ್ಧಿಸಿಕೊಂಡು ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಕ್ಕಾಗಿ ಶಾಂತಿಯುತ ಸಹಬಾಳ್ವೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರು ಚೀನಾದ ಮೇಲೆ ತೀವ್ರ ಪರಿಣಾಮ ಬೀರಿದ್ದಾರೆ. ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪ್ತಿಯನ್ನು ಮೀರಿ ಸಕಾರಾತ್ಮಕ ಮತ್ತು ಮುಕ್ತ ಮನೋಭಾವದಿಂದ ಮುಂದೆ ಹೋಗಲು ಸಾಧ್ಯವಿದೆ. ಚೀನಾ ಶಾಂತಿಯುತ ಅಭಿವೃದ್ಧಿಗೆ ಬದ್ಧವಾಗಿದ್ದು, ಏಕಪಕ್ಷೀಯತೆ ಮತ್ತು ಪ್ರಾಬಲ್ಯವನ್ನು ವಿರೋಧಿಸುತ್ತದೆ ಎಂದು ವೀಡಾಂಗ್ ತಿಳಿಸಿದರು.