ನವದೆಹಲಿ: ಭಾರತದ ಆಂತರಿಕ ವಿಚಾರಗಳ ಬಗ್ಗೆ ಪದೇ ಪದೆ ಪ್ರತಿಕ್ರಿಯಿಸುತ್ತಿರುವ ಚೀನಾದ ನಡೆಯನ್ನು ತಡೆಯಲು ಕೇಂದ್ರ ಸರ್ಕಾರ ಬೀಜಿಂಗ್ಗೆ ತೀಕ್ಷಣವಾದ ಪ್ರತಿಕ್ರಿಯೆಗಳನ್ನು ನೀಡಿದೆ.
ಬೀಜಿಂಗ್ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ವಿಚಾರದಲ್ಲಿ ತನ್ನ ಮೊಂಡುವಾದ ಮುಂದುವರಿಸಿಕೊಂಡು ಹೋಗುತ್ತಿದೆ. ಪಾಕಿಸ್ತಾನ ಅಕ್ರಮವಾಗಿ ಭಾರತಕ್ಕೆ ಸೇರಿದ್ದ ಭೂಭಾಗವನ್ನು ಆಕ್ರಮಿಸಿಕೊಂಡಿದೆ ಎಂಬುದನ್ನು ಅದು ಮರೆಯಬಾರದು ಎಂದು ಪಿಒಕೆ ಬಗ್ಗೆ ನೆನಪಿಸಿದರು.
ಜಮ್ಮು ಮತ್ತು ಕಾಶ್ಮೀರವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಿದ್ದು, ಕಾನೂನು ಬಾಹಿರ ಮತ್ತು ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಂತಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿತ್ತು. ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಈ ವಿಷಯದ ಕುರಿತು ಭಾರತದ ಸ್ಥಿರವಾದ ಮತ್ತು ಸ್ಪಷ್ಟ ನಿಲುವು ಏನು ಎಂಬುದನ್ನು ಚೀನಾಕ್ಕೆ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಿಸಿದ್ದು, ಭಾರತದ ಆಂತರಿಕ ವಿಚಾರ. ಚೀನಾ ಸೇರಿದಂತೆ ಇತರ ಯಾವುದೇ ದೇಶಗಳು ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಖಡಕ್ಕಾಗೇ ಮಾರುತ್ತರ ಕೊಟ್ಟಿದ್ದಾರೆ.