ಲಖನೌ: ಉತ್ತರ ಪ್ರದೇಶ ವಿಧಾನಸಭೆಯು ನಿನ್ನೆ ಅಪರೂಪದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯ್ತು. ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಪ್ರತಿಭಟನೆ ನಡೆಸಿದ್ದು, ಅವರಿಗೆ ಪ್ರತಿಪಕ್ಷಗಳ ಶಾಸಕರೂ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ, ತಮ್ಮದೇ ಕ್ಷೇತ್ರದ ಅಧಿಕಾರಿಯೊಬ್ಬರ ಮೇಲಿನ ಗಂಭೀರ ಆರೋಪದ ಬಗ್ಗೆ ಚರ್ಚಿಸಲು ಬಿಜೆಪಿ ಶಾಸಕ ನಂದ ಕಿಶೋರ್ ಗುಜ್ಜರ್ಗೆ ಅವಕಾಶ ನೀಡಲು ವಿಧಾನಸಭೆ ಸ್ಪೀಕರ್ ನಿರಾಕರಿಸಿದರು. ಹೀಗಾಗಿ ಇದನ್ನು ವಿರೋಧಿಸಿದ ನಂದ ಕಿಶೋರ್ ಪ್ರತಿಭಟನೆಗೆ ಮುಂದಾದರು. ಇವರೊಂದಿಗೆ ಇತರ ಸುಮಾರು 70 ಬಿಜೆಪಿ ಶಾಸಕರು ಕೂಡಾ ನಂದ ಕಿಶೋರ್ ಬೆಂಬಲಕ್ಕೆ ಬಂದರು. ಅವರೊಂದಿಗೆ ಪ್ರತಿಪಕ್ಷ ಸದಸ್ಯರೂ ಸೇರಿಕೊಂಡರು.
ಸಮಾಜವಾದಿ ಪಕ್ಷದ ಶಾಸಕರು ಕೂಡಾ ಕಿಶೋರ್ ಬೆಂಬಲಕ್ಕೆ ನಿಂತ ಬಳಿಕ ಸ್ಪೀಕರ್, ಸದನ ಕಲಾಪವನ್ನು ಮುಂದೂಡಿದರು. ಬಳಿಕ ಡಿಸಿಎಂ ದಿನೇಶ್ ಶರ್ಮಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ, ಆಕ್ರೋಶಿತ ಶಾಸಕರನ್ನು ಸಮಾಧಾನಪಡಿಸಿದರಾದರೂ ಶಾಸಕರು ಯಾವುದಕ್ಕೂ ಬಗ್ಗಲಿಲ್ಲ.
ಬಳಿಕ ಆಕ್ರೋಶಿತ ಶಾಸಕರನ್ನು ಸ್ಪೀಕರ್ ತಮ್ಮ ಕಚೇರಿಗೆ ಕರೆದು, ಕಿಶೋರ್ ಹೇಳಬೇಕಿದ್ದ ವಿಚಾರದ ಬಗ್ಗೆ ಕುಳಿತು ವಿವರವಾಗಿ ಮಾತನಾಡುವಂತೆ ತಿಳಿಸಿದರು. ಆದರೆ ತಮ್ಮದೇ ಕ್ಷೇತ್ರದ ಅಧಿಕಾರಿಯೊಬ್ಬರ ಮೇಲಿನ ಆರೋಪ ವಿಚಾರದ ಬಗ್ಗೆ ತಿಳಿಸಿದ ಶಾಸಕ ಕಿಶೋರ್, ಅಧಿಕಾರಿಯನ್ನು ಕರೆದು ಕ್ಷಮೆ ಕೇಳುವಂತೆ ಮಾಡುವವರೆಗೂ ತಮ್ಮ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.
ಕಡೆಗೆ ಈ ಬಗ್ಗೆ ಬುಧವಾರದವರೆಗೆ ಅಂದರೆ ಇಂದು ಸಂಜೆವರೆಗೆ ಕಾದು, ಅದುವರೆಗೂ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಧರಣಿ ಮುಂದುವರೆಸುವುದಾಗಿ ಬಿಜೆಪಿ ಶಾಸಕ ಎಚ್ಚರಿಸಿದ್ದಾರೆ.