ಚೆನ್ನೈ (ತಮಿಳುನಾಡು): ತಮಿಳುನಾಡಿನ ಕಲಕುರಿಚಿಯ ಎಡಿಎಂಕೆ ಶಾಸಕ ಪ್ರಭು ಅವರು ಸೌಂದರ್ಯ ಎಂಬ 19 ವರ್ಷದ ಯುವತಿಯನ್ನು ವಿವಾಹವಾಗಿದ್ದಾರೆ. ಅಂತರ್ಜಾತಿ ವಿವಾಹವಾದ ಕಾರಣ ಯುವತಿಯ ತಂದೆ ಮದುವೆ ದಿನವೇ ವಧು-ವರರ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ.
ಅಕ್ಟೋಬರ್ 5 ರಂದು ಮದುವೆ ನಡೆದಿದೆ. ಸೌಂದರ್ಯ ಮೇಲ್ವರ್ಗ ಕುಟುಂಬದ ಯುವತಿಯಾಗಿದ್ದು ದ್ವಿತೀಯ ಪಿಯು ವಿದ್ಯಾರ್ಥಿನಿ. ಈಕೆಯನ್ನು ವರಿಸಿದ ಶಾಸಕ ಪ್ರಭು ದಲಿತ ಕುಟುಂಬದವರಾಗಿದ್ದು, ಬಿಟೆಕ್ ಪದವೀಧರರು. ಮಗಳು ದಲಿತ ಶಾಸಕನನ್ನು ಮದುವೆಯಾಗಿರುವುದನ್ನು ವಿರೋಧಿಸಿದ ತಂದೆ ಸ್ವಾಮಿನಾಥನ್ ತನ್ನ ಮಗಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ದೂರಿದ್ದಾರೆ.
ದಲಿತ ಶಾಸಕನ ಅಂತರ್ಜಾತಿ ವಿವಾಹ ಕಲಕುರಿಚಿ ಶಾಸಕ ಪ್ರಭು ಅಕ್ಟೋಬರ್ 1 ರಂದು ಸಂಜೆ 4 ಗಂಟೆಯ ಸುಮಾರಿಗೆ ನನ್ನ ಮಗಳನ್ನು ಅಪಹರಿಸಿದ್ದಾರೆ. 15 ವರ್ಷಗಳಿಂದ ಪ್ರಭು ನಮ್ಮ ಕುಟುಂಬದೊಂದಿಗೆ ಸ್ನೇಹ ಸಂಬಂಧ ಹೊಂದಿದ್ದರು. ಕಳೆದ ನಾಲ್ಕು ವರ್ಷಗಳಿಂದ ನನ್ನ ಮಗಳನ್ನು ಪ್ರೀತಿಸುತ್ತಿದ್ದರು. ಆವಾಗ ನನ್ನ ಮಗಳಿನ್ನೂ ಅಪ್ರಾಪ್ತ ವಯಸ್ಕಳಾಗಿದ್ದಳು. ನನಗೆ ಜಾತಿಯ ಸಮಸ್ಯೆ ಇಲ್ಲ. ಇಬ್ಬರ ನಡುವಿನ ವಯಸ್ಸಿನ ಅಂತರ ಹೆಚ್ಚಿರುವುದೇ ಸಮಸ್ಯೆ ಎಂದು ಸ್ವಾಮಿನಾಥನ್ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಶಾಸಕ ಪ್ರಭು, ನಾನು ಸೌಂದರ್ಯಳನ್ನು ಅಪಹರಿಸಿ, ಬೆದರಿಸಿ, ಬಲವಂತವಾಗಿ ಮದುವೆಯಾಗಿದ್ದೇನೆಂದು ವದಂತಿಗಳು ಹರಿದಾಡುತ್ತಿವೆ. ಇದು ಸತ್ಯಕ್ಕೆ ದೂರವಾದ ಮಾತು. ನಾವಿಬ್ಬರು ಪರಸ್ಪರ ಪ್ರೀತಿಸಿ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದೇವೆ. ಕಳೆದ ನಾಲ್ಕು ತಿಂಗಳಿಂದ ಇಬ್ಬರು ಪ್ರೀತಿಸುತ್ತಿದ್ದೆವು. ಮದುವೆ ಮಾಡಿಕೊಳ್ಳಲು ಸೌಂದರ್ಯ ಮನೆಯವರ ಅನುಮತಿ ಕೇಳಿದೆವು. ಆದರೆ, ಅವರು ಒಪ್ಪಲಿಲ್ಲ. ಬಳಿಕ ನಮ್ಮ ಕುಟುಂಬದ ಒಪ್ಪಿಗೆ ಮೇರೆಗೆ ನಾವಿಬ್ಬರು ಮದುವೆಯಾದೆವು. ನಾನು ಆಕೆಯನ್ನು ಬೆದರಿಸಿಲ್ಲ ಅಥವಾ ಯಾವುದೇ ರೀತಿಯ ಆಮಿಷವೊಡ್ಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗ ಮದ್ರಾಸ್ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿ, ತನ್ನ ಮಗಳನ್ನು ಹಾಜರುಪಡಿಸಲು ತಂದೆ ಸ್ವಾಮಿನಾಥನ್ ಕೋರಿದ್ದಾರೆ.