ಹೈದರಾಬಾದ್ (ತೆಲಂಗಾಣ): ವರುಣನ ರೌದ್ರಾವತಾರಕ್ಕೆ ಮುತ್ತಿನ ನಗರಿಯ ಜನರು ನಲುಗಿದ್ದಾರೆ. ಅತಿಯಾದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದಾಗಿ ಬಂಡಲಗುಡ ಪ್ರದೇಶದಲ್ಲಿ ಮನೆ ಮೇಲೆ ಬೃಹತ್ ಬಂಡೆವೊಂದು ಉರುಳಿಬಿದ್ದ ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ದಕ್ಷಿಣ ವಲಯದ ಡಿಜಿಪಿ ಗಜರಾವ್ ಭೂಪಾಲ್ ತಿಳಿಸಿದ್ದಾರೆ.
ಈ ಮಧ್ಯೆ ಸಂಸದ ಅಸಾದುದ್ದೀನ್ ಓವೈಸಿ, ಖಾಸಗಿ ಗೋಡೆ ಕುಸಿದು, ಬಂಡಲಗುಡ ಮೊಹಮ್ಮದಿಯ ಬೆಟ್ಟದಲ್ಲಿ 9 ಮಂದಿ ಮೃತಪಟ್ಟಿದ್ದಾರೆಂದು ಟ್ವೀಟ್ ಮಾಡಿದ್ದಾರೆ. ‘ನಾನು ಬಂಡಲಗುಡದ ಬೆಟ್ಟಕ್ಕೆ ಭೇಟಿ ನೀಡಿ ತಪಾಸಣೆ ಮಾಡಿದ್ದೇನೆ. ಅಲ್ಲಿ ಗೋಡೆ ಕುಸಿದು, 9 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಂಶಾಬಾದ್ನ ಬಸ್ನಲ್ಲಿ ಸಿಲುಕಿದ್ದ ಜನರನ್ನು ಸ್ಥಳಾಂತರ ಮಾಡಿದ್ದೇವೆ. ಈ ವರ್ಷ ಹಿಂದೆಂದೂ ಕಂಡು ಕೇಳರಿಯದಂಥ ಮಳೆಯಾಗುತ್ತಿದ್ದು, ಸಾರ್ವಜನಿಕರೆಲ್ಲರೂ ಮನೆಯಲ್ಲೇ ಇರಿ’ ಎಂದು ಟ್ವೀಟ್ ಮಾಡಿದ್ದಾರೆ.
ಚಂದ್ರಯಾನ ಗುಟ್ಟಾ ಕ್ಷೇತ್ರದ ಶಾಸಕ ಅಕ್ಬರುದ್ದೀನ್ ಓವೈಸಿ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಬಳಿಕ ಮೃತರ ಕುಟುಂಬಗಳನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು.