ಅಗರ್ತಲಾ (ತ್ರಿಪುರ): ಈಶಾನ್ಯ ಭಾರತದ ಸಣ್ಣ ರಾಜ್ಯ ತ್ರಿಪುರವು ಬಿದಿರಿನಿಂದ ತಯಾರಿಸಿದ ಬಾಟಲಿಗಳು ಮತ್ತು ಅಕ್ಕಿಯಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ಖ್ಯಾತಿಗೆ ಈಗ ಇನ್ನೊಂದು ಗರಿ ಮೂಡಿದ್ದು, ಹೊಸದಾಗಿ ಬಿದಿರಿನ ಎಲೆಯ ಚಹಾವನ್ನು ಪರಿಚಯಿಸಲಾಗಿದೆ.
ಸುಮಾರು 500 ಕೆ.ಜಿ ಬಿದಿರಿನ ಎಲೆ ಚಹಾದ ಮೊದಲ ಸರಕನ್ನು ಈಗಾಗಲೇ ದೆಹಲಿಯ ರಫ್ತುದಾರರಿಗೆ ಮಾರಾಟ ಮಾಡಲಾಗಿದೆ. ಇನ್ನೂ 3-4 ಕೆ.ಜಿಯನ್ನು ತ್ರಿಪುರಾದಲ್ಲಿ ಮೂರು ದಿನಗಳ ಕಾಲ ಉಳಿದು ಸಂಪೂರ್ಣ ಉತ್ಪಾದನಾ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದ ಮಧುರೈನ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ ಎಂದು ಬಿದಿರಿನ ಎಲೆಯ ಚಹಾ ಪರಿಚಯಿಸಿದ ಸಮೀರ್ ಜಮಾತಿಯಾ ಹೇಳಿದ್ದಾರೆ. ಕೆ.ಜಿಗೆ 120 ರೂಪಾಯಿಂತೆ ಇವರು ಚಹಾ ಹುಡಿಯನ್ನು ರಫ್ತುದಾರರರಿಗೆ ಮಾರಾಟ ಮಾಡಿದ್ದಾರೆ.
ಭಾರತೀಯ ಬಿದಿರು ಸೊಸೈಟಿಯ ಸದಸ್ಯರಾಗಿರುವ ಜಮಾತಿಯಾ, ಹಲವಾರು ದೇಶಗಳಿಗೆ ಪ್ರವಾಸ ಮಾಡಿದ್ದಾರೆ. ಚೀನಾದಲ್ಲಿ ಹಲವು ವರ್ಷಗಳ ಕಾಲ ಇದ್ದು, ಬಿದಿರಿನ ಉತ್ಪಾದನೆಗಳ ಬಗ್ಗೆ ಅಧ್ಯಯನ ಮಾಡಿ, ಇವರ ಸ್ವಂತ ಚಹಾ ಪರಿಚಯಿಸಿದ್ದಾರೆ. ಬಿದಿರಿನ ಎಲೆಗಳನ್ನು ಸಂಗ್ರಹಿಸಿ ಅದರಿಂದ ಚಹಾ ಹುಡಿ ತಯಾರಿಸಿ ಪ್ಯಾಕ್ ಮಾಡುವವರೆಗಿನ ಎಲ್ಲಾ ಕೆಲಸವನ್ನು ಸಮೀರ್ ಜಮಾತಿಯಾ ಮಾಡುತ್ತಾರೆ.
ಬಿದಿರಿನ ಎಲೆ ಚಹಾವು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಬಿದಿರಿನ ಎಲೆಗಳಲ್ಲಿ ಅಪಾರ ಪ್ರಮಾಣದ ಸಿಲಿಕಾನ್ ಇರುವುದರಿಂದ ಕೂದಲು, ಚರ್ಮ ಮತ್ತು ಉಗುರುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬಿದಿರಿನ ಎಲೆಯ ಚಹಾ ವಿಭಿನ್ನ ಪರಿಮಳವನ್ನು ಹೊಂದಿರುತ್ತದೆ. ತ್ರಿಪುರದಲ್ಲಿ ಸುಮಾರು 30 ಜಾತಿಯ ಬಿದಿರನ್ನು ಬೆಳೆಯಲಾಗುತ್ತದೆ ಮತ್ತು ಆ ಎಲ್ಲಾ ಜಾತಿಗಳಿಂದ ಚಹಾವನ್ನು ಉತ್ಪಾದಿಸಬಹುದು ಎಂದು ಜಮಾತಿಯಾ ಹೇಳಿದ್ದಾರೆ. ಸಮೀರ್ ಅವರು ಕೊಂಕೈಚ್ ಜಾತಿ ಬಿದಿರಿನ ಎಲೆಗಳನ್ನು ಬಳಸಿ ಚಹಾ ಹುಡಿ ತಯಾರಿಸಿದ್ದಾರೆ. ಒಂದಲ್ಲ ಒಂದು ದಿನ ತ್ರಿಪುರಾದ ಬಿದಿರಿನ ಎಲೆಯ ಚಹಾ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುತ್ತದೆ ಎಂದು ಸಮೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.