ಹೈದರಾಬಾದ್:ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ಅಣ್ಣನ ಹಾದಿಯಲ್ಲೇ ಹಜ್ಜೆ ಇಟ್ಟಿದ್ದು, ಇದೀಗ ತಂದೆಯ ಜನ್ಮದಿನದಂದೇ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್ ರಾಜಶೇಖರ್ ರೆಡ್ಡಿ ಅವರ ಮಗಳಾಗಿರುವ ಶರ್ಮಿಳಾ ಇಂದು ಹೊಸ ಪಕ್ಷ ಘೋಷಣೆ ಮಾಡಿದ್ದು, ಅದಕ್ಕೆ 'ವೈಎಸ್ಆರ್ ತೆಲಂಗಾಣ ಪಾರ್ಟಿ' ಎಂದು ಹೆಸರಿಟ್ಟಿದ್ದಾರೆ. ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದರು.
ಹೊಸ ಪಕ್ಷ ಘೋಷಿಸಿದ ಸಿಎಂ ಜಗನ್ ಸಹೋದರಿ ಶರ್ಮಿಳಾ ಕಳೆದ ಏಪ್ರಿಲ್ ತಿಂಗಳಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಹೇಳಿಕೊಂಡಿದ್ದ ಶರ್ಮಿಳಾ, ತಂದೆ ವೈಎಸ್ಆರ್ ಅವರ ಹಾದಿಯಲ್ಲಿ ಸಾಗಲು ಬಯಸುತ್ತೇನೆ ಎಂದು ಹೇಳಿದ್ದರು. 2023ರಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸುವ ಉದ್ದೇಶದಿಂದ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಆದರೆ ಪಕ್ಷದ ಕಾರ್ಯಕ್ರಮದ ವೇಳೆ ಅಣ್ಣ ಜಗನ್ ಮೋಹನ್ ರೆಡ್ಡಿ ಭಾಗಿಯಾಗಿರಲಿಲ್ಲ. ಈ ಹಿಂದಿನಿಂದಲೂ ಇದಕ್ಕೆ ಆಂಧ್ರ ಸಿಎಂ ವಿರೋಧಿಸಿದ್ದರು.
ಇದನ್ನೂ ಓದಿರಿ: ಮದುವೆಯಾಗದಿದ್ದಕ್ಕೆ ಖಿನ್ನತೆ: ಆತ್ಮಹತ್ಯೆಗೆ ಶರಣಾದ ಮಹಿಳಾ ಸಬ್ಇನ್ಸ್ಪೆಕ್ಟರ್
ಈ ವೇಳೆ ಮಾತನಾಡಿರುವ ಶರ್ಮಿಳಾ, ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಓರ್ವ ಸುಳ್ಳುಗಾರನಾಗಿದ್ದು, ನೀಡಿರುವ ಯಾವುದೇ ಭರವಸೆ ಈಡೇರಿಕೆ ಮಾಡಿಲ್ಲ. ಅವರ ಆಡಳಿತದಿಂದ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ ಎಂದಿದ್ದಾರೆ.ತೆಲಂಗಾಣದಲ್ಲಿ ಸದ್ಯ ಮುಖ್ಯಮಂತ್ರಿ ಕೆಸಿಆರ್ ನೇತೃತ್ವದ ಟಿಆರ್ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ) ಹಾಗೂ ಬಿಜೆಪಿ ಪ್ರಮುಖ ಪಕ್ಷಗಳಾಗಿವೆ.