ಪಾಟ್ನಾ(ಬಿಹಾರ): ನನ್ನ ಮೇಲೆ ಆ್ಯಸಿಡ್ ದಾಳಿಗೆ ಯತ್ನ ನಡೆದಿದ್ದು, ದೇವರ ದಯೆಯಿಂದ ಪಾರಾಗಿದ್ದೇನೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಖಾತೆಯ ರಾಜ್ಯ ಸಚಿವ ಪಶುಪತಿ ಪರಾಸ್ ಗಂಭೀರವಾದ ಆರೋಪ ಮಾಡಿದ್ದಾರೆ.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಪಶುಪತಿ ಪರಾಸ್, ಸಮಾಜಘಾತುಕ ಶಕ್ತಿಗಳಿಂದ ಆ್ಯಸಿಡ್ ಮಾದರಿಯ ದ್ರಾವಣವನ್ನು ಹಾಜೀಪುರದಲ್ಲಿ ಕೆಲವರು ನನ್ನ ಮೇಲೆ ಎಸೆದಿದ್ದರು ಎಂದು ತಿಳಿಸಿದ್ದಾರೆ.
ಪರಾಸ್ ಅವರು ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಆಗಸ್ಟ್ 23ರಂದು ತಮ್ಮ ಕ್ಷೇತ್ರವಾದ ಬಿಹಾರದ ಹಾಜೀಪುರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರ ಮೇಲೆ ಆ್ಯಸಿಡ್ ದಾಳಿಯ ಯತ್ನ ಜರುಗಿದೆ.
ನನಗೆ ಅದ್ಧೂರಿ ಸ್ವಾಗತ ನೀಡಲು ಜನರು ಕಾಯುತ್ತಿದ್ದರು. ಆದರೆ ಇದನ್ನು ಸಹಿಸದ ಕೆಲವರು ನನ್ನ ವಿರುದ್ಧ ಪಿತೂರಿ ನಡೆಸಿ, ದಾಳಿಗೆ ಯತ್ನಿಸಿದ್ದಾರೆ. ಆ್ಯಸಿಡ್ನಿಂದಾಗಿ ನನ್ನ ಬಟ್ಟೆಗಳು ಸುಟ್ಟುಹೋದವು ಎಂದು ಪರಾಸ್ ಮಾಹಿತಿ ನೀಡಿದ್ದಾರೆ.
ಈ ಘಟನೆಯನ್ನು ಪೊಲೀಸರ ಸಂಪೂರ್ಣ ವೈಫಲ್ಯ ಎಂದು ಪಶುಪತಿ ಪರಾಸ್ ಆರೋಪಿಸಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅನೇಕ ಬೆದರಿಕೆ ಕರೆಗಳು ಬರುತ್ತಿವೆ. ಅಷ್ಟೇ ಅಲ್ಲದೇ ಹೆಚ್ಚುವರಿ ಭದ್ರತೆಗಾಗಿ ತಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಲಾಗಿದೆ. ನಾನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಈ ಘಟನೆಯ ಬಗ್ಗೆ ವಿವರಿಸಿದ್ದೇನೆ. ಸಿಎಂ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಕೃಷ್ಣ ಜನ್ಮಾಷ್ಟಮಿ ದಿನದಂದೇ ಪಾಕ್ನ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ದೇಗುಲ ಧ್ವಂಸ