ಮಿರ್ಜಾಪುರ(ಉತ್ತರಪ್ರದೇಶ):ವಿದ್ಯೆ ಯಾರಪ್ಪನ ಸ್ವತ್ತಲ್ಲ. ಅದು ಶ್ರೀಮಂತರಾದರೂ ಸರಿ, ಬಡವರಾದರೂ ಸರಿ. ಎಲ್ಲರಿಗೂ ಒಂದೇ. ವಿದ್ಯೆ ಒಲಿಯಬೇಕಾದರೆ ಮಾಡಬೇಕಾದ್ದೊಂದೇ. ಅದುವೇ ಕಠಿಣ ಪರಿಶ್ರಮ. ಹೀಗೆ ಹಗಲಿರುಳು ಶ್ರಮಿಸಿ ಐಎಎಸ್ ಅಧಿಕಾರಿಯಾಗಿದ್ದಾರೆ ಉತ್ತರಪ್ರದೇಶ ಕುರಿ ಕಾಯುವ ಯುವಕ!.
ಆ ಅಧಿಕಾರಿಯ ಹೆಸರು ರಾಮ್ ಪ್ರಕಾಶ್. ರಾಜಸ್ತಾನದ ಪಾಲಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾರೆ. ಮೂಲತಃ ಉತ್ತರಪ್ರದೇಶ ರಾಮ್ ಪ್ರಕಾಶ್ 6 ನೇ ಪ್ರಯತ್ನದಲ್ಲಿ ಐಎಎಸ್ ಪರೀಕ್ಷೆ ಪಾಸಾಗಿದ್ದಾರೆ. ತಮ್ಮ ಬಾಲ್ಯ ಮತ್ತು ಶಿಕ್ಷಣದ ಬಗ್ಗೆ ಬಗ್ಗೆ ಅವರು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.
ರಾಮ್ ಪ್ರಕಾಶ್ ಅವರು ಶಿಕ್ಷಣದ ದಿನಗಳಲ್ಲಿ ಕುಟುಂಬಸ್ಥರು ಸಾಕಿದ ಕುರಿಗಳನ್ನು ಹಳ್ಳಿಯ ಹೊರವಲಯದಲ್ಲಿ ಮೇಯಿಸಲು ಹೋಗುತ್ತಿದ್ದರಂತೆ. ಇದರ ಜೊತೆಜೊತೆಗೇ ಶಿಕ್ಷಣವನ್ನು ಮುಂದುವರಿಸಿದ್ದರಂತೆ. ಕುರಿ ಕಾಯುವುದು ರಾಮ್ ಪ್ರಕಾಶ್ರ ದೈನಂದಿನ ಚಟುವಟಿಕೆಯಲ್ಲಿ ಒಂದಾಗಿತ್ತಂತೆ.
ಮಿರ್ಜಾಪುರದ ಜಮುವಾ ಬಜಾರ್ನ ನಿವಾಸಿಯಾದ ರಾಮ್ ಪ್ರಕಾಶ್ 2018ರಲ್ಲಿ 6ನೇ ಪ್ರಯತ್ನದಲ್ಲಿ ತಾವು ಐಎಎಸ್ ಪಾಸು ಮಾಡಿದ್ದ ಬಗ್ಗೆ ಈಚೆಗೆ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ರಾಮ್ ಪ್ರಕಾಶ್ರ ಈ ಭಾವನಾತ್ಮಕ ಪೋಸ್ಟ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪರಿಶ್ರಮಿ ಐಎಎಸ್ ಅಧಿಕಾರಿಗೆ ಟ್ವಿಟರ್ನಲ್ಲಿ 65 ಸಾವಿರಕ್ಕೂ ಅಧಿಕ ಹಿಂಬಾಲಕರಿದ್ದಾರೆ. ರಾಮ್ ಪ್ರಕಾಶ್ ರಾಜಸ್ಥಾನ ಕೇಡರ್ನ 2018 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ.
ಇದನ್ನೂ ಓದಿ:ಬ್ಯಾಂಕಲ್ಲ, 60 ಅಡಿ ಉದ್ದದ ಸೇತುವೆಯನ್ನೇ ಕದ್ದ ದರೋಡೆಕೋರರು! ಬಿಹಾರದಲ್ಲೊಂದು ವಿಚಿತ್ರ ಕಳವು