ಬಾಗಲಕೋಟೆ: ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನನೊಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ನಂದಗಾಂವ ಗ್ರಾಮದ ಹೊರ ವಲಯದಲ್ಲಿ ಗುರುವಾರ ರಾತ್ರಿ ನಡೆದಿದೆ.
ಸಚಿನ್ ಭೀಮಪ್ಪ ದಳವಾಯಿ (22), ಪ್ರತಿಭಾ ಮಡಿವಾಳರ (19) ಮೃತರು. ಸಚಿನ್ ಕುರುಬ ಸಮಾಜಕ್ಕೆ ಸೇರಿದ ಯುವಕ. ಪ್ರತಿಭಾ ಅಗಸರ ಸಮಾಜಕ್ಕೆ ಸೇರಿದ ಯುವತಿ. ಪ್ರೇಮಿಗಳ ವಿಷಯ ಇತ್ತೀಚೆಗೆ ಬಹಿರಂಗವಾಗಿತ್ತು. ಪ್ರೇಮಿಗಳಿಗೆ ಊರಿನ ಹಿರಿಯರು ಬೈದು ಬುದ್ಧಿ ಹೇಳಿದ್ದರು ಎಂದು ಹೇಳಲಾಗಿದೆ.
ಮೃತ ಸಚಿನ್ ಗ್ರಾಮದ ಬೀರಪ್ಪ ದೇವರ ದೇವಸ್ಥಾನದ ಪೂಜಾರಿಯಾಗಿದ್ದರು. ಇವರಿಗೆ ಅಂತರ್ಜಾತಿ ಮದುವೆಗೆ ಪೋಷಕರಿಂದ ಅಡ್ಡಿಯಾಗಿತ್ತು. ಪೊಲೀಸರ ತನಿಖೆಯಿಂದಷ್ಟೇ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಬೇಕಿದೆ. ಸ್ಥಳಕ್ಕೆ ಮಹಾಲಿಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.