ಬೆಂಗಳೂರು: ರೈತರ ತೊಂದರೆ ನಿವಾರಣೆಗೆ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಇತ್ಯಾದಿಗಳ ಇತ್ಯರ್ಥಕ್ಕಾಗಿ ಕಂದಾಯ ಅದಾಲತ್ ನಡೆಸಲಾಗುತ್ತಿದೆ. ಮಂಜೂರಾದ ಜಮೀನುಗಳ ಪೋಡಿ, ದುರಸ್ತಿ ಕಾರ್ಯವನ್ನು ಆನ್ಲೈನ್ನಲ್ಲಿ ನಿರ್ವಹಿಸಲು ಹೊಸ ತಂತ್ರಾಂಶ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಭೂರಹಿತ, ಬಡ ರೈತರಿಗೆ ಸರ್ಕಾರದಿಂದ ವಿವಿಧ ಯೋಜನೆಯಡಿ ಮಂಜೂರಾದ ಭೂಮಿಗೆ ಪಿ.ನಂ ಮತ್ತು ದುರಸ್ತಿ ಆಗದೆ, ಜಮೀನು ಪರಭಾರೆ ಮಾಡಲು ರೈತರಿಗೆ ತೊಂದರೆಯಾಗುತ್ತಿರುವ ಕುರಿತು ವಿಧಾನಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರಿಸಿದರು.
ಲಭ್ಯತೆಗಿಂತ ಹೆಚ್ಚಿನ ಭೂ ಮಂಜೂರು ಹಾಗು ಕಂದಾಯ ಇಲಾಖೆಯ ಮೂಲ ದಾಖಲೆಗಳು ಶಿಥಿಲವಾಗಿರುವುದರಿಂದ ಸಮಸ್ಯೆ ಉಂಟಾಗಿದೆ. ತಾಲೂಕುಗಳಿಗೆ ಕಡಿಮೆ ಪ್ರಕರಣಗಳಿರುವ ಇತರ ತಾಲೂಕುಗಳ ಭೂಮಾಪಕರನ್ನು ನಿಯೋಜಿಸಿ, ಪೋಡಿ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುತ್ತಿದೆ ಎಂದರು.
700 ಸರ್ವೆಯರ್ ಮತ್ತು 34 ಎಡಿಎಲ್ಆರ್ಗಳನ್ನು ನೇಮಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ತಕ್ಷಣವೇ ಇತ್ಯರ್ಥಪಡಿಸುತ್ತೇನೆ ಎಂದು ಹೇಳಲಾರೆ. ಆದರೆ ವ್ಯವಸ್ಥೆಯ ಸುಧಾರಣೆಗೆ ಅಗತ್ಯ ನೀಲನಕಾಶೆ ರೂಪಿಸಿದ್ದೇವೆ ಎಂದು ತಿಳಿಸಿದರು.