ಮೈಸೂರು: ಮುಖ್ಯ ನ್ಯಾಯಮೂರ್ತಿಗಳ ನಿವಾಸಕ್ಕೆ ಪ್ರಧಾನಿ ಹೋಗಿ ಗಣಪತಿ ಪೂಜೆಯಲ್ಲಿ ಭಾಗವಹಿಸಿದ್ದು ತಪ್ಪೇನಿಲ್ಲ. ಇಬ್ಬರು ರಾಷ್ಟ್ರದ ಉನ್ನತ ಸ್ಥಾನದಲ್ಲಿ ಇರುವ ವ್ಯಕ್ತಿಗಳು. ಇಬ್ಬರು ಸೇರಿ ಗಣಪತಿ ಪೂಜೆ ಮಾಡಿದರಲ್ಲಿ ತಪ್ಪನ್ನು ಯಾಕೆ ಹುಡುಕಿತ್ತೀರೀ? ಈ ವಿಚಾರದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ. ಇವರಿಬ್ಬರು ರಾಷ್ಟ್ರದ ಉನ್ನತಿಗಾಗಿ ದುಡಿಯುತ್ತಿದ್ದಾರೆ. ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ. ಇದನ್ನು ದೊಡ್ಡ ವಿಚಾರವಾಗಿ ಮಾಡುವುದು ಸರಿಯಲ್ಲ" ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದರು.
ಕೇಂದ್ರ ಸಚಿವರಾದ ಮೇಲೆ ಮೊದಲ ಬಾರಿಗೆ ಮೈಸೂರು ನಗರಕ್ಕೆ ಭೇಟಿ ನೀಡಿದ ಸಚಿವ ವಿ. ಸೋಮಣ್ಣ ಅವರನ್ನು ಮೈಸೂರಿನ ಮಣಿಪಾಲ ಆಸ್ಪತ್ರೆಯ ಬಳಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಸಚಿವರು ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ದರ್ಶನ ಪಡೆದರು. ನಂತರ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಇದೇ ವೇಳೆ, ನಾಗಮಂಗಲ ಗಲಭೆ ಕುರಿತು ಪ್ರತಿಕ್ರಿಯಿಸಿ, "ನಾಗಮಂಗಲ ಗಲಭೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ, ಅವರ ಮೇಲೆ ಕ್ರಮ ಆಗಬೇಕು. ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು" ಎಂದರು.
"ಗೃಹ ಸಚಿವರು ಬಹಳ ಹಿರಿಯರಿದ್ದಾರೆ. ಯಾವ ಕಾರಣಕ್ಕೆ ನಾಗಮಂಗಲ ಗಲಭೆಯನ್ನು ಸಣ್ಣ ಗಲಭೆ ಎಂದು ಹೇಳಿದರೋ ಗೊತ್ತಿಲ್ಲ. ಮತ ಓಲೈಕೆ ರಾಜಕಾರಣ ಬಿಡಬೇಕು. ಎಲ್ಲಕ್ಕಿಂತ ದೇಶ ಮುಖ್ಯ. ಇಂತಹ ಘಟನೆಗಳು ಮುಂದೆ ನಡೆಯದಂತೆ ಎಚ್ಚರ ವಹಿಸಬೇಕು. ಗಣೇಶ ಮೂರ್ತಿ ನಮ್ಮ ಭಾವನೆಗಳ ಸಂಕೇತ. ಅದರ ಮರೆವಣಿಗೆಗೆ ಅಡ್ಡಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು" ಎಂದು ಹೇಳಿಕೆ ನೀಡಿದರು.