ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿಂದು ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಪಕ್ಷದ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಜೊತೆ ಕರ್ನಾಟಕದ ಜನತೆ ಇರಲಿದ್ದಾರೆ. ಅವರ ಎಲ್ಲ ಕೆಲಸಗಳ ಜೊತೆ ನಾವಿರಲಿದ್ದೇವೆ. ನೆಹರು ನಂತರ ಮೋದಿ ಮೂರನೇ ಬಾರಿ ಪ್ರಧಾನಿ ಆಗಿದ್ದಾರೆ. ನಾವು ಮೋದಿ ಅವರಿಗೆ ತುಂಬು ಹೃದಯದ ಸ್ವಾಗತ ಮಾಡಿದ್ದೇವೆ. ಮೋದಿ ಹ್ಯಾಟ್ರಿಕ್ ಗೆಲುವಿಗೆ ಅಭಿನಂದಿಸಿ ಕಾರ್ಯಕಾರಿಣಿಯು ಮೊದಲ ಅಭಿನಂದನಾ ನಿರ್ಣಯ ಕೈಗೊಂಡಿತು ಎಂದು ತಿಳಿಸಿದರು.
ಎರಡನೇ ನಿರ್ಣಯವಾದ ಕಾಂಗ್ರೆಸ್ ಸರ್ಕಾರ ವಿಚಾರವನ್ನು ಪ್ರತಿಪಕ್ಷ ನಾಯಕ ಅಶೋಕ್ ಮಂಡಿಸಿದರು. ರಾಜ್ಯ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ, ಭ್ರಷ್ಟಾಚಾರದಲ್ಲಿ ತೊಡಗಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡುವ ಕೆಲಸ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಡಿಸಿರುವ ಬಗ್ಗೆ ಖಂಡಿಸಿದ್ದೇವೆ. ಈ ಸರ್ಕಾರಕ್ಕೆ ಮುಂದುವರೆಯುವ ನೈತಿಕ ಹಕ್ಕಿಲ್ಲ. ಸಿಎಂ ರಾಜಿನಾಮೆ ಕೊಡಬೇಕು ಅಂತಾ ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು.
Live : ಪತ್ರಿಕಾಗೋಷ್ಠಿ
— BJP Karnataka (@BJP4Karnataka) July 4, 2024
ಸ್ಥಳ : ಅರಮನೆ ಮೈದಾನ, ಬೆಂಗಳೂರು https://t.co/uWJ1mlRYQT
ಅಲ್ಲದೇ, ಒಂದು ವರ್ಷದಲ್ಲಿ ಆಡಳಿತ ಪಕ್ಷದ ವೈಫಲ್ಯವನ್ನು ಜನರ ಮುಂದೆ ತೆಗೆದುಕೊಂಡು ಹೋಗಿದ್ದೇವೆ. ಕೇವಲ ಗ್ಯಾರಂಟಿ ಹೆಸರು ಹೇಳಿ, ಅದನ್ನೂ ತಲುಪಿಸದೆ ಜನರಿಗೆ ಅನ್ಯಾಯ ಮಾಡಿದೆ. ಮುಂದಿನ ದಿನದಲ್ಲಿ ರಸ್ತೆಗಳಲ್ಲಿ ಜನರಿಗೆ ಸರ್ಕಾರದ ದುರಾಡಳಿತ ತಿಳಿಸುವ ಕೆಲಸ ಮಾಡುತ್ತೇವೆ. ಸರ್ಕಾರ ಸರಿದಾರಿಗೆ ತರುವ ಕೆಲಸ ಮಾಡುತ್ತೇವೆ. ಸರ್ಕಾರದ ವೈಫಲ್ಯ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ವಿವರಿಸಿದರು.
ಮೂರನೇ ನಿರ್ಣಯವಾಗಿ ಹಿಂದೂ, ಹಿಂದುತ್ವದ ವಿರೋಧಿ ಹೇಳಿಕೆಗೆ ಬಿಜೆಪಿ ಖಂಡನಾ ನಿರ್ಣಯ ಮಂಡಿಸಲಾಯಿತು. ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಮಾಡಿದ ಭಾಷಣದ ಬಗ್ಗೆ ನೋಡಿದ್ದೇವೆ. ಸಭಾಧ್ಯಕ್ಷರ ಮಾತನ್ನು ಧಿಕ್ಕರಿಸಿದ ನಡೆ, ಆಘಾತಕಾರಿ ಹೇಳಿಕೆ ಗಮನಿಸಿದ್ದೇವೆ. ಇದನ್ನ ಖಂಡಿಸಿ, ಜನರ ಬೇಷರತ್ ಕ್ಷಮೆಗೆ ಆಗ್ರಹಿಸಿ ನಿರ್ಣಯ ಅಂಗೀಕರಿಸಿದ್ದೇವೆ ಎಂದು ಕಾಗೇರಿ ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ