ಬೆಂಗಳೂರು: ಜನರಿಗೆ ಕುಡಿಯುವ ನೀರು ಸಮಸ್ಯೆ ಆಗದಂತೆ ಹಾಗೂ ಪ್ರದೇಶಗಳಲ್ಲಿ ಇರುವಂತಹ ಜನಸಂಖ್ಯೆ ಆಧಾರದ ಮೇಲೆ ಅಗತ್ಯ ಇರುವಷ್ಟು ನೀರು ಸರಬರಾಜು ಮಾಡುವಂತೆ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಬಂಡೆಪಾಳ್ಯ ಗ್ರಾಮಕ್ಕೆ ಇಂದು ಭೇಟಿ ನೀಡಿದ ಅವರು, ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ವ್ಯವಸ್ಥೆ ಪರಿಶೀಲಿಸಿದರು. ಗ್ರಾಮಸ್ಥರೊಂದಿಗೆ ಮಾತನಾಡಿ ನೀರಿನ ಸರಬರಾಜು ಹಾಗೂ ನೀರಿನ ಲಭ್ಯತೆ, ನೀರಿನ ಗುಣಮಟ್ಟ ಎಲ್ಲದರ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು.
ಬಂಡಿಪಾಳ್ಯದಲ್ಲಿ ನೀರಿನ ವಿತರಣೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಂತಹ ಸಂದರ್ಭದಲ್ಲಿ ಉಚಿತ ಟ್ಯಾಂಕರ್ ಮೇಲೆ ಸ್ಟಿಕ್ಕರ್ ಅಂಟಿಸದೇ ಇರುವಂತಹ ಅಧಿಕಾರಿಗಳ ಮೇಲೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಗರಂ ಆದರು. ಜಲಮಂಡಳಿ ವತಿಯಿಂದ ಉಚಿತವಾಗಿ ನೀರು ಸರಬರಾಜು ಮಾಡುತ್ತಿರುವಂತಹ ಟ್ಯಾಂಕರ್ಗಳ ಮೇಲೆ ಉಚಿತ ಸ್ಟಿಕ್ಕರ್ ಅನ್ನು ಅಂಟಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವಾರು ಬಾರಿ ಸೂಚನೆ ನೀಡಲಾಗಿದೆ. ಅಂಟಿಸದಿದ್ದರೆ ನೀರಿನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆ ಉಚಿತ ನೀರಿನ ಟ್ಯಾಂಕರ್ಗಳ ಮೇಲೆ ಸ್ಟಿಕರ್ಗಳನ್ನ ಅಳವಡಿಸಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನೀರಿನ ಲಭ್ಯತೆ ಮತ್ತು ಜನಸಂಖ್ಯೆ ಆಧಾರದ ಮೇಲೆ ಟ್ಯಾಂಕ್ಗಳನ್ನು ಅಳವಡಿಸುವುದು ಸೂಕ್ತವಾಗಿರುವುದರ ಕುರಿತು ಬಂಡಿಪಾಳ್ಯದ ಗ್ರಾಮಸ್ಥರೊಂದಿಗೆ ಮಾತನಾಡಿ ನೀರಿನ ಪ್ರಮಾಣ ಹಾಗೂ ಲಭ್ಯತೆಯ ಬಗ್ಗೆ ಮಾಹಿತಿ ಪಡೆದರು. ಆಗ ಕೆಲವು ಮಹಿಳೆಯರು ಇನ್ನಷ್ಟು ನೀರಿನ ವಿತರಣೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಟ್ಯಾಂಕ್ಗಳನ್ನು ಅಳವಡಿಸುವಂತೆ ಹಾಗೂ ನಿತ್ಯ ಬೆಳಗ್ಗೆ ಹಾಗೂ ಸಂಜೆ ಅವುಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಓದಿ: ಹೆಚ್ಚುತ್ತಿದೆ ತಾಪಮಾನ: ಬೇಸಿಗೆಯಲ್ಲಿ ಪ್ರತಿನಿತ್ಯ ಎಷ್ಟು ಪ್ರಮಾಣದ ನೀರು ಕುಡಿಯಬೇಕು?