ಬೆಂಗಳೂರು: "ಕಲಾ ಸಾಧಕ ಸಂಗಮದಲ್ಲಿ ಭಾರತೀಯ ಕಲೆಗಳ ಪ್ರದರ್ಶನ ಲಕ್ಷಾಂತರ ಜನರ ಎದುರು ಪ್ರದರ್ಶನ ಕಂಡಿದೆ. ನಮ್ಮ ಕಲೆಗಳು ಆನಂದ ಮತ್ತು ಉಲ್ಲಾಸವನ್ನು ಉಂಟು ಮಾಡುತ್ತವೆ. ಜನವರಿ 22ರ ರಾಮಮಂದಿರದ ಲೋಕಾರ್ಪಣೆಯ ನಂತರ ನಮ್ಮ ಮೂಲ ಸಂಸ್ಕೃತಿಯ ಕಲೆಗಳ ಬಗ್ಗೆ ಜನರ ಆಸಕ್ತಿ ಇನ್ನೂ ಹೆಚ್ಚಾಗಿದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು.
ಬೆಂಗಳೂರು ಹೊರವಲಯದಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಆಯೋಜಿಸಲಾಗಿರುವ ಸಂಸ್ಕಾರ ಭಾರತಿ ಸಂಸ್ಥೆಯ ಅಖಿಲ ಭಾರತೀಯ ಕಲಾ ಸಾಧಕ ಸಂಗಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, "4 ದಿನಗಳ ಈ ಕಾರ್ಯಕ್ರಮ ಐತಿಹಾಸಿಕವಾಗಿದೆ. ಉತ್ಸಾಹ ಆನಂದದಿಂದ ಆಯೋಜಕರು, ಕಲಾ ಸಾಧಕರು ಕಾರ್ಯಕ್ರಮವನ್ನು ಸಫಲಗೊಳಿಸಿದ್ದಾರೆ. ಈ ಉತ್ಸವದಿಂದ ಸಂಸ್ಕಾರ ಭಾರತಿಯ ಹೆಸರು ದೇಶ, ವಿದೇಶಗಳಲ್ಲಿ ಮನೆ ಮಾಡಿದಂತೆ ಆಗಿದೆ" ಎಂದು ಹೇಳಿದರು.
![RSS chief Mohan Bhagwat reaction on indian art](https://etvbharatimages.akamaized.net/etvbharat/prod-images/04-02-2024/kn-bng-03-rss-chief-mohan-bhagavath-at-samskara-bharathi-kala-sanghama-velidictory-event-7210969_04022024202143_0402f_1707058303_267.jpg)
"1920 ರಲ್ಲಿ ಕಾಂಗ್ರೆಸ್ ಅಧಿವೇಶನದ ಉಸ್ತುವಾರಿಯನ್ನು ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ್ ಅವರು ವಹಿಸಿದ್ದರು. ಆಗ ಅಧ್ಯಕ್ಷರು ಗಾಂಧೀಜಿ ಆಗಿದ್ದರು. ಆಗ ಹೆಡ್ಗೆವಾರ್ ಸಂಪೂರ್ಣ ಗೋ ಹತ್ಯೆ ನಿಷೇಧ ಮತ್ತು ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು. ಆದರೆ ಆಗ ಕಾಂಗ್ರೆಸ್ನ ಪ್ರಮುಖ ನಾಯಕರು ಇವರ ಪ್ರಸ್ತಾವನೆಯನ್ನು ಒಪ್ಪಿರಲಿಲ್ಲ. ಲೋಕಮಾನ್ಯ ತಿಲಕರು ಮತ್ತು ಗಾಂಧೀಜಿಯ ಮನಸಿನಲ್ಲಿ ಸ್ವರಾಜ್ಯದ ಕನಸಿದ್ದರೂ ಅವರು ಎಲ್ಲರ ಮುಂದೆ ಅವರ ಚಿಂತನೆಯನ್ನು ಒಪ್ಪಲು ತಯಾರಿರಲಿಲ್ಲ. ಹೆಡ್ಗೆವಾರ್ ಧೃತಿಗೆಡದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪನೆ ಮಾಡಿದರು. ಈಗ ಅವರ ವಿಚಾರಗಳು ನನಸಾಗುತ್ತಿವೆ. ಇದೇ ಮಾದರಿಯಲ್ಲಿ ಸಂಸ್ಕಾರ ಭಾರತಿ ಕೂಡ ದೃಢವಾದ ಚಿಂತನೆಯೊಂದಿಗೆ ಹಂತ ಹಂತವಾಗಿ ಬೆಳೆದು ನಿಂತಿದೆ" ಎಂದು ಶ್ಲಾಘಿಸಿದರು.
![RSS chief Mohan Bhagwat reaction on indian art](https://etvbharatimages.akamaized.net/etvbharat/prod-images/04-02-2024/kn-bng-03-rss-chief-mohan-bhagavath-at-samskara-bharathi-kala-sanghama-velidictory-event-7210969_04022024202143_0402f_1707058303_119.jpg)
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಮಾತನಾಡಿ, "ಭಾರತ ಪುರಾತನ ನಿತ್ಯ ನೂತನ ಸಂಸ್ಕೃತಿಯಾಗಿದೆ. ಆದರೆ ಸನಾತನ ಧರ್ಮ ಪಾಲಿಸುತ್ತಿದ್ದ ಜನರಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದ್ದ ಸಮಯದಲ್ಲಿ ಅದನ್ನು ಸರಿಪಡಿಸುವ ಕಾರ್ಯವನ್ನು ಆದಿ ಶಂಕರರು ಮೊದಲಿಗರಾಗಿ ಮಾಡಿ ಪುನರುತ್ಥಾನಕ್ಕೆ ಮುನ್ನುಡಿ ಬರೆದರು. ದೇಶದ ಉದ್ದಗಲಕ್ಕೂ ಸಂಚರಿಸಿ ಜಾಗೃತಿಯನ್ನು ತಂದರು. ಅದರ ನಂತರ ಸಾಕಷ್ಟು ಮಹಾ ಪುರುಷರು ನಮ್ಮ ಸಂಸ್ಕೃತಿಯನ್ನು ಉಳಿಸಲು ಬೆಳೆಸಲು ಶ್ರಮಪಟ್ಟರು. ಆಧುನಿಕ ಭಾರತದಲ್ಲಿ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಅಂಗ ಸಂಸ್ಥೆಗಳಾಗಿವೆ. ಈ ವಿಚಾರವನ್ನು ಸಂಸ್ಕಾರ ಭಾರತಿ ಅಖಿಲ ಭಾರತೀಯ ಕಲಾ ಸಾಧಕ ಸಂಗಮ ನಡೆಸಿ ಮತ್ತೊಮ್ಮೆ ಸಾಬೀತು ಪಡಿಸಿದೆ" ಎಂದರು.
![RSS chief Mohan Bhagwat reaction on indian art](https://etvbharatimages.akamaized.net/etvbharat/prod-images/04-02-2024/kn-bng-03-rss-chief-mohan-bhagavath-at-samskara-bharathi-kala-sanghama-velidictory-event-7210969_04022024202143_0402f_1707058303_374.jpg)
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿಯ ಅಖಿಲ ಭಾರತೀಯ ಅಧ್ಯಕ್ಷ ವಾಸುದೇವ್ ಕಾಮತ್, ಉಪಾಧ್ಯಕ್ಷ ಮೈಸೂರು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅಶ್ವಿನ್ ದಳ್ವಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಅಂಬಿಗ ಸಮಾಜ ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ವರದಿ ಸಲ್ಲಿಕೆ; ಸಚಿವ ಸತೀಶ್ ಜಾರಕಿಹೊಳಿ