ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಷ್ಠೆಯಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳವನ್ನು ಜನರಿಗೆ ಕೊಡುಗೆಯಾಗಿ ನೀಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಟೀಕಿಸಿದ್ದು, ತೈಲ ಬೆಲೆ ಹೆಚ್ಚಳ ಖಂಡಿಸಿ ಸೋಮವಾರ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ಧ ಸೋಮವಾರ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್, ಎಲ್ಲ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಿಸಿದರು. ಏರಿಸಿದ ದರವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರವು ಆಸ್ತಿ ತೆರಿಗೆ ಹೆಚ್ಚಳ, ಕುಡಿಯುವ ನೀರಿನ ದರ ಏರಿಕೆ, ವಿದ್ಯುತ್ ದರ ಏರಿಕೆ ಮಾಡಿದೆ. ವಾಹನಗಳ ತೆರಿಗೆ, ಆಸ್ತಿ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಹಣದುಬ್ಬರ, ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನವರು, ಚುನಾವಣೆ ವೇಳೆ ಬೆಲೆ ಇಳಿಸುವ ಭರವಸೆ ಕೊಟ್ಟಿದ್ದರು. ಇದೀಗ ರಾಜ್ಯದ ಜನತೆಗೆ ಕಾಂಗ್ರೆಸ್ಸಿನವರದು ಬೆಲೆ ಏರಿಕೆಯ ಗ್ಯಾರಂಟಿ ಎಂದು ಅವರು ತಿಳಿಸಿದರು.
ಸರಕಾರವು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿದೆ. ಪೆಟ್ರೋಲ್ ಬೆಲೆ 3 ರೂ. ಮತ್ತು ಡೀಸೆಲ್ ಬೆಲೆ 3.50 ರೂ ಏರಿಸಿದ್ದಾರೆ. ಕರ್ನಾಟಕ ಸೇಲ್ಸ್ ಟ್ಯಾಕ್ಸನ್ನು ಶೇ 26ರಿಂದ ಶೇ 30ಕ್ಕೆ ಏರಿಸಿದ್ದಾರೆ. ಡೀಸೆಲ್ ತೆರಿಗೆಯನ್ನು ಶೇ 14ರಿಂದ 18 ಕ್ಕೆ ಏರಿಸಿದ್ದಾರೆ. ಹಿಂದೆ ಒಂದು ರೂ. ಹೆಚ್ಚಳ ಮಾಡಿದ್ದಾಗ ಹಣಕಾಸು ಸಚಿವ, ಆರ್ಥಿಕ ತಜ್ಞರಾಗಿ ಸಿದ್ದರಾಮಯ್ಯನವರು ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಲಿದೆ ಎಂದು ಪ್ರಬಲವಾಗಿ ವಿರೋಧಿಸಿದ್ದರು. ನಾಚಿಕೆ ಆಗಲ್ವ ಎಂಬ ಭಾಷೆಯನ್ನೂ ಬಳಸಿದ್ದರು. ಇವತ್ತು ವಿದ್ಯುತ್ ದರವನ್ನು ಶೇ 100ರಿಂದ 150ರಷ್ಟು ಏರಿಸಿದ್ದಾರೆ. ಯಾವ ರೀತಿ ಇವರು ಸಮಜಾಯಿಷಿ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಬಂದ ಬಳಿಕ ಎಂದೂ ಕಾಣದಂಥ ಕೆಟ್ಟ ಆಡಳಿತ ಇದು ಎಂದು ಟೀಕಿಸಿದರು. ಕೆಟ್ಟ ನಿರ್ಧಾರ, ದರ ಏರಿಕೆಗಳನ್ನು ಏಕಾಏಕಿ ಮಾಡುತ್ತಿದ್ದಾರೆ. ಯಾವುದೇ ಸಮಾಲೋಚನೆ, ಮಾತುಕತೆ ಇಲ್ಲದೆ, ಸ್ಪಷ್ಟತೆ ಇಲ್ಲದೆ ಅಧಿಕಾರದ ದುರ್ಬಳಕೆ ಆಗುತ್ತಿದೆ. ಬಿಜೆಪಿ ಆಡಳಿತ ನಡೆಸುವ ಹರಿಯಾಣ ರಾಜ್ಯದಲ್ಲಿ 95.54 ರೂ, ಉತ್ತರ ಪ್ರದೇಶದಲ್ಲಿ 94.55 ರೂ, ಗುಜರಾತ್- 94.50 ರೂ., ಅಸ್ಸಾಂ 97 ರೂ. ದರ ಇದೆ. ಆದರೆ, ಕಾಂಗ್ರೆಸ್ ಆಡಳಿತ ಮಾಡುವ ರಾಜ್ಯಗಳಲ್ಲಿ 103 ರೂ, 107 ರೂ, ತೆಲಂಗಾಣದಲ್ಲಿ 109.50 ರೂ., ಬಿಜೆಪಿಯೇತರ ಆಡಳಿತ ಇರುವ ಕೇರಳದಲ್ಲಿ 105.68 ರೂ., ದರ ಇದೆ ಎಂದು ವಿವರ ನೀಡಿದರು.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಪರ ವಾತಾವರಣ ಇಲ್ಲ. ನೆಗೆಟಿವ್ ರೇಟಿಂಗ್ ಇದೆ ಎಂದು ವಿಶ್ಲೇಷಿಸಿದರು. ಭೂಮಿ ಸಿಗಲ್ಲ, ನೀರು ಕೊಡುವುದಿಲ್ಲ, ಕರೆಂಟ್ ದರ ಹೆಚ್ಚು, ಇಂಥ ಹತ್ತಾರು ಸಮಸ್ಯೆಗಳಿವೆ ಎಂದು ವಿವರಿಸಿದರು. ಆರ್ಥಿಕ ವ್ಯವಸ್ಥೆ ಹೆಚ್ಚಿಸಿ ಆದಾಯ ಹೆಚ್ಚಿಸಬೇಕಿತ್ತು. ಇರುವವರನ್ನೇ ಪೂರ್ತಿ ಕತ್ತು ಕುಯ್ದು ಇರುವಂಥವರು ಬದುಕಲು ಸಾಧ್ಯವಿಲ್ಲದ ರೀತಿಯಲ್ಲಿ ಆಡಳಿತ ಮಾಡುತ್ತಿರುವವರು ಕಾಂಗ್ರೆಸ್ಸಿಗರು ಎಂದರು.
ಬಿಲ್ಡರ್ಗಳು, ಕೈಗಾರಿಕೆದಾರರು ರಾಜ್ಯವನ್ನು ತೊರೆಯುವಂತಾಗಿದೆ. ಹಣದುಬ್ಬರ ಒಂದೆಡೆ ಇನ್ನೊಂದೆಡೆ ಲೂಟಿ, ಭ್ರಷ್ಟಾಚಾರ ಈ ಸರ್ಕಾರದಿಂದ ನಡೆದಿದೆ. ಎಲ್ಲರ ಲೂಟಿ ಕಾರ್ಯ ನಡೆದಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಮೊತ್ತಕ್ಕಾಗಿ ಆತ್ಮಹತ್ಯೆ ಎನ್ನುವಷ್ಟು ಆಡಳಿತ ಹದಗೆಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.