ಮೈಸೂರು: ಎಸ್ಐಟಿ ತನಿಖೆ ನಡೆಸುತ್ತಿದೆ. ನಮ್ಮ ಪೊಲೀಸರ ಮೇಲೆ ನಮಗೆ ನಂಬಿಕೆಯಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ದೌರ್ಜನ್ಯ ಆರೋಪದ ಪೆನ್ ಡ್ರೈವ್ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸುತ್ತಿದೆ. ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇದೆ. ನಿಷ್ಪಕ್ಷವಾಗಿ ತನಿಖೆ ಮಾಡಿ ವರದಿ ಕೊಡುತ್ತಾರೆ. ಈ ಪ್ರಕರಣವನ್ನು ಪೊಲೀಸರ ಮೂಲಕ ತನಿಖೆ ಮಾಡಿಸುತ್ತಿದ್ದೇವೆ. ಈ ಪ್ರಕರಣದ ತನಿಖೆಯಲ್ಲಿ ನಾವು ಭಾಗವಹಿಸಿಲ್ಲ. ಪೊಲೀಸರ ಮೇಲೆ ವಿಶ್ವಾಸ ಇದೆ. ಸತ್ಯಾಸತ್ಯತೆ ಹೊರಗೆ ಬರಲಿದೆ. ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಸಂಪರ್ಕ ಇದೆ ಎಂಬ ಸುದ್ದಿ ನಿಜವಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎನ್ನುವ ಕಾರಣಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ನಾಯಕರು ಹಾಗೂ ದೇವೇಗೌಡರು ಸಿಬಿಐ ಬಗ್ಗೆ ಬೇರೆ ಬೇರೆ ರೀತಿಯ ಹೇಳಿಕೆ ಕೊಡುತ್ತಿದ್ದರು. ಈಗ ನೋಡಿದ್ರೆ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಹೇಳುತ್ತಿದ್ದಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು.
ಹಿಂದೆ ನಮ್ಮ ಸರ್ಕಾರದಲ್ಲೇ ಲಾಟರಿ ಕೇಸ್, ಜಾರ್ಜ್ ಕೇಸ್ ಹಾಗೂ ಡಿ.ಕೆ ರವಿ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೆವು. ಆದರೆ ಈ ಪ್ರಕರಣದಲ್ಲಿ ಯಾರಿಗೆ ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹಾಗಂತ ನಮಗೆ ಸಿಬಿಐ ಬಗ್ಗೆ ನಂಬಿಕೆ ಇಲ್ಲ ಎಂಬ ಅರ್ಥವಲ್ಲ ಎಂದು ಸ್ಪಷ್ಟಪಡಿಸಿದರು. ಹೆಚ್ಡಿ ರೇವಣ್ಣ ಮೇಲೆ ಯಾವುದೇ ಕೇಸ್ ಇಲ್ಲವೆಂದರೆ ಅವರು ಯಾಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ರಾಜಕೀಯ ಎಲ್ಲಿಂದ ಬಂತು? ಅಪರಾಧವೇ ಆಗಿಲ್ಲ ಎಂದರೆ ಜಾಮೀನು ಅರ್ಜಿ ತಿರಸ್ಕಾರ ಯಾಕೆ ಆಯಿತು? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ವಿದ್ಯಾರ್ಥಿಗಳಿಗೆ ಅಭಿನಂದನೆ: ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ಮೊದಲ ಶ್ರೇಯಾಂಕ ಪಡೆದ ವಿದ್ಯಾರ್ಥಿನಿ ಮೊರಾರ್ಜಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಹುಡುಗಿ. ಆ ವಿದ್ಯಾರ್ಥಿನಿ ಮೊದಲ ಶ್ರೇಯಾಂಕ್ ಪಡೆದಿರುವುದು ನಿಜಕ್ಕೂ ಸಂತೋಷ ಆಗಿದ್ದು, ಅಭಿನಂದನೆ ಸಲ್ಲಿಸುತ್ತೇನೆ. ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಮೊರಾರ್ಜಿ ಶಾಲೆಯನ್ನು ತೆರೆಯಲಾಗಿತ್ತು. ಈಗ ಪ್ರತಿಯೊಂದು ಹೋಬಳಿಗೂ ಒಂದೊಂದು ವಸತಿ ಶಾಲೆಯನ್ನು ಕಲ್ಪಿಸಲಾಗಿದೆ. ಈಗಾಗಲೇ 900ಕ್ಕೂ ಹೆಚ್ಚು ವಸತಿ ಶಾಲೆಗಳು ಇವೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಈ ಶಾಲೆಗಳನ್ನು ಆರಂಭಿಸಲಾಗಿದೆ ತೆರೆಯಾಗಿದೆ ಎಂದರು.
ಇದನ್ನೂ ಓದಿ: ಸೂರ್ಯ ಚಂದ್ರರಿರುವವರೆಗೂ ಬಸವಣ್ಣನವರ ವಚನಗಳು ಮನುಕುಲಕ್ಕೆ ದಾರಿದೀಪ: ವಿಜಯೇಂದ್ರ - Basaveshwar Jayanti 2024
ಬಸವ ಪುತ್ಥಳಿಗೆ ಮಾಲಾರ್ಪಣೆ: ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಬಸವ ಜಯಂತಿಯನ್ನು ಸರ್ಕಾರದ ವತಿಯಿಂದ ಅದ್ಧೂರಿಯಾಗಿ ಆಚರಿಸುತ್ತಿಲ್ಲ. ಹಾಗೂ, ಸರ್ಕಾರಿ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತಿಲ್ಲ. ಆದರೂ ಮೈಸೂರಿನ ಗನ್ ಹೌಸ್ ಬಳಿ ಇರುವ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತೇನೆ. ಬಸವಣ್ಣ ಅವರ ಆದರ್ಶ, ವಿಚಾರಧಾರೆಗಳನ್ನು ಸ್ಮರಣೆ ಮಾಡುತ್ತೇನೆ. ರಾಜ್ಯದ ಜನರಿಗೆ ಬಸವ ಜಯಂತಿಯ ಶುಭಾಶಯ ತಿಳಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು. ಬಳಿಕ, ಮೈಸೂರು ನಗರದ ಗನ್ ಹೌಸ್ ಬಳಿ ಇರುವ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.