ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳ ವಿರುದ್ಧ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಇದುವರೆಗಿನ ತನಿಖೆಯಲ್ಲಿ ಸಂಗ್ರಹಿಸಿರುವ ಪ್ರತ್ಯಕ್ಷ, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಸೇರಿದಂತೆ 231 ಸಾಕ್ಷ್ಯಗಳನ್ನೊಳಗೊಂಡಂತೆ ಒಟ್ಟು 3,991 ಪುಟಗಳುಳ್ಳ 07 ಸಂಪುಟಗಳ 10 ಕಡತಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಬೆಂಗಳೂರು ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್.ಎಸ್ ನೇತೃತ್ವದಲ್ಲಿ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್.ಎನ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡ ಈ ಚಾರ್ಜ್ಶೀಟ್ ಸಿದ್ಧಪಡಿಸಿದೆ. ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಭೇದಿಸುವಲ್ಲಿ ಮತ್ತು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ.
ಮೂವರು ಪ್ರತ್ಯಕ್ಷ ಸಾಕ್ಷಿದಾರರು, ಎಫ್ಎಸ್ಎಲ್ ಹಾಗೂ ಸಿಎಫ್ಎಸ್ಎಲ್ ವರದಿಯ 8 ಸಾಕ್ಷಿಗಳು, ಸಿಆರ್ಪಿಸಿ 161 ಹಾಗೂ 164ರಡಿಯಲ್ಲಿ ದಾಖಲಿಸಲಾಗಿರುವ 27 ಜನರ ಹೇಳಿಕೆಗಳು, ಪಂಚರು 29, 8 ಜನ ಸರ್ಕಾರಿ ಅಧಿಕಾರಿಗಳು (ತಹಶೀಲ್ದಾರರು, ವೈದ್ಯರು ಹಾಗೂ ಆರ್.ಟಿ.ಓ ಅಭಿಯಂತರರು), 56 ಜನ ಪೊಲೀಸರು ಸೇರಿದಂತೆ ಒಟ್ಟು 231 ಸಾಕ್ಷ್ಯಗಳನ್ನೊಳಗೊಂಡ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
''ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, 24ನೇ ಎಸಿಎಂಎಂ ನ್ಯಾಯಾಲಯಕ್ಕೆ 17 ಆರೋಪಿಗಳ ವಿರುದ್ಧ ಇಂದು ಅಂತಿಮ ವರದಿ ಸಲ್ಲಿಸಲಾಗಿದೆ. ಪ್ರತ್ಯಕ್ಷ, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಸೇರಿದಂತೆ 231 ಸಾಕ್ಷ್ಯಗಳನ್ನೊಳಗೊಂಡಂತೆ ಒಟ್ಟು 3,991 ಪುಟಗಳುಳ್ಳ, 07 ಸಂಪುಟಗಳ, 10 ಕಡತಗಳ ವರದಿ ಇದಾಗಿದೆ. ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಸಂಪೂರ್ಣ ವರದಿ ಬಂದಿದೆ. ಆದರೆ, ಹೈದರಾಬಾದ್ನಿಂದ ಸಿಎಫ್ಎಸ್ಎಲ್ (ಫೋರೆನ್ಸಿಕ್ ಲ್ಯಾಬ್) ವರದಿ ಬರುವುದು ಬಾಕಿ ಇದೆ. ಅಲ್ಲಿಗೆ ಕೆಲವು ತಾಂತ್ರಿಕ ಡಿವೈಸ್ಗಳನ್ನು ಕಳಿಸಲಾಗಿತ್ತು. ಅವುಗಳಲ್ಲಿನ ಕೆಲವು ಸಂಪೂರ್ಣ ಮಾಹಿತಿ ಬರುವುದು ಬಾಕಿ ಇದೆ. ಈ ಮೊದಲು ಬಂದ ಕೆಲವು ಮಾಹಿತಿ ಹಿನ್ನೆಲೆ ಈ ಅಂತಿಮ ವರದಿ ಸಲ್ಲಿಸಿದ್ದೇವೆ.'' ಬಿ.ದಯಾನಂದ್ - ಬೆಂಗಳೂರು ನಗರ ಪೊಲೀಸ್ ಆಯುಕ್ತ.
ಚಾರ್ಜ್ಶೀಟ್ ಹೊತ್ತುತಂದ ಪೊಲೀಸ್ ಸಿಬ್ಬಂದಿ (ETV Bharat)
ಪ್ರಕರಣ ಹಿನ್ನೆಲೆ: ಜೂನ್ 9 ರಂದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸಮೀಪದ ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅಂದು ಕರ್ತವ್ಯಕ್ಕೆ ಬಂದ ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣದ ತನಿಖೆಗಿಳಿದ ಪೊಲೀಸರು ಸಿಸಿಟಿವಿ ಫೂಟೇಜ್ಗಳು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಕಲೆಹಾಕಿ ಆರೋಪಿಗಳನ್ನು ಬಂಧಿಸಿದ್ದರು.
ಈ ಕೇಸ್ಗೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ರವಿಶಂಕರ್, ಧನರಾಜ್, ವಿನಯ್, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ನಾಯ್ಕ್ ಎಂಬ 17 ಜನ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದರು.
ಕಳೆದ ವಾರ ನಟ ದರ್ಶನ್ ಮತ್ತು ಸಹಚರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆಯುತ್ತಿದ್ದಾರೆ ಎನ್ನಲಾದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಘಟನೆ ಬಳಿಕ ಪವಿತ್ರಾ ಗೌಡ ಹೊರತುಪಡಿಸಿ ಉಳಿದ ದರ್ಶನ್ ಸೇರಿದಂತೆ ವಿಚಾರಣಾಧೀನ ಕೈದಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಯಿತು.