ಬೆಂಗಳೂರು: ರೈತರಿಗೆ ಅನುಕೂಲವಾಗೋದು ವಿಪಕ್ಷಗಳಿಗೆ ಇಷ್ಟವಿಲ್ಲ. ನಾವು ರೈತರಿಗೆ ಸಹಾಯ ಮಾಡಲು ಹಾಲಿನ ಪ್ರಮಾಣ ಹೆಚ್ಚಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ KMF ನಿಂದ ದಾಖಲೆಯ 1 ಕೋಟಿ ಹಾಲಿನ ಸಂಗ್ರಹವಾದ ಹಿನ್ನೆಲೆ ಸಂಭ್ರಮಾಚರಣೆ ನಡೆಸಿ ಬಳಿಕ ಮಾತನಾಡಿದ ಸಿಎಂ ಅವರು, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಇದೇ ಸಮಯಲ್ಲಿ 90 ಲಕ್ಷ ಲೀಟರ್ ಇತ್ತು. ಈಗ ಒಂದು ದಿನಕ್ಕೆ 1 ಕೋಟಿ ಲೀಟರ್ ಹಾಲನ್ನ ತಲುಪಿದ್ದೇವೆ. ಬಹುಶಃ ಇದೊಂದು ಮೈಲಿಗಲ್ಲು. ನಾನು ಸ್ವಲ್ಪ ದಿನದ ಮಟ್ಟಿಗೆ ಹಿಂದೆ ಪಶುಸಂಗೋಪನೆ ಸಚಿವನಾಗಿದ್ದೆ. ಆಗ ಮಿಲ್ಕ್ ಯೂನಿಯನ್ ಮತ್ತು ಡೈರಿ ಸಪರೇಟ್ ಆಗಿತ್ತು. ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗ್ತಿರೋದ್ರಿಂದ 50 ml ಲೀಟರ್ ಹೆಚ್ಚು ಮಾಡಬೇಕಾಯ್ತು ಎಂದರು.
ರೈತರಿಂದ ಹಾಲು ತೆಗೆದುಕೊಳ್ಳಲ್ಲ ಎಂದು ಹೇಳೋಕೆ ಆಗಲ್ಲ. ಅದಕ್ಕೋಸ್ಕರ ಹಾಲಿನ ಪ್ರಮಾಣವನ್ನು ಹೆಚ್ಚು ಮಾಡಿದ್ದೇವೆ. ಹೆಚ್ಚಾಗಿರೋ 50 ಎಂಎಲ್ ಗೆ 2 ರೂಪಾಯಿ ಹೆಚ್ಚಿಗೆ ಮಾಡಿದ್ದೇವೆ ಅಷ್ಟೇ. ಇದು ಹಾಲಿನ ಬೆಲೆ ಏರಿಕೆ ಅಲ್ಲ. ಆದ್ರೆ ಇದನ್ನ ವಿಪಕ್ಷಗಳು ಆರ್ಥ ಮಾಡಿಕೊಂಡಿಲ್ಲ. ವಿಪಕ್ಷಗಳಿಗೆ ರೈತರಿಗೆ ಅನುಕೂಲವಾಗೋದು ಇಷ್ಟವಿಲ್ಲ. ನಾವು ರೈತರಿಗೆ ಸಹಾಯ ಮಾಡಲು ಮಾಡ್ತಿದ್ದೇವೆ. 2 ರೂಪಾಯಿ ಸಹಾಯಧನ ಇದದ್ದನ್ನು 5 ರೂಪಾಯಿಗೆ ಹೆಚ್ಚಿಗೆ ಮಾಡಿದ್ದು ನಾವು. ಈ ಅಶೋಕ್ಗೆ ಗೊತ್ತಿಲ್ಲದೆ ಏನು ಏನೋ ಮಾತನಾಡ್ತಾನೆ ಎಂದು ಕಿಡಿಕಾರಿದರು.
ಸಂಭ್ರಮಾಚರಣೆ ವೇಳೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಸಚಿವರಾದ ಕೆ.ಎನ್.ರಾಜಣ್ಣ , ಜಮೀರ್ ಅಹಮದ್ ಖಾನ್, ಚಲುವರಾಯ ಸ್ವಾಮಿ, ಬೈರತಿ ಸುರೇಶ್, ಕೆ.ವೆಂಕಟೇಶ್ ಉಪಸ್ಥಿತರಿದ್ದರು.