ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಶ್ರೀಗಳ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಉಂಟುಮಾಡಿದೆ. ಈ ಕುರಿತು ಲಿಂಗಾಯತ ಶಾಸಕರಾದ ಎಂ.ಆರ್.ಪಾಟೀಲ್, ಮಹೇಶ್ ಟೆಂಗಿನಕಾಯಿ ಹಾಗು ಅರವಿಂದ ಬೆಲ್ಲದ್ ಅವರು 'ಈಟಿವಿ ಭಾರತ'ಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಜೋಶಿ ಲಿಂಗಾಯತರನ್ನು ಬೆಳೆಸಿದ್ದಾರೆ-ಎಂ.ಆರ್.ಪಾಟೀಲ್: ಕುಂದಗೋಳ ಶಾಸಕ ಎಂ.ಆರ್.ಪಾಟೀಲ್ ಮಾತನಾಡಿ, ಸ್ವಾಮೀಜಿ ರಾಜಕೀಯ ಪ್ರವೇಶಕ್ಕೆ ನಮ್ಮ ವಿರೋಧವಿಲ್ಲ. ಎಲ್ಲರಿಗೂ ರಾಜಕೀಯಕ್ಕೆ ಬರುವ ಹಕ್ಕಿದೆ. ಆದರೆ ಸ್ವಾಮೀಜಿಗಳಿಗೆ ಲಿಂಗಾಯತರು ಮಾತ್ರವಲ್ಲ, ಎಲ್ಲ ಧರ್ಮದವರೂ ಬೇಕು. ನಾವು ಶಾಸಕರಾಗಿರುವುದು ಕೂಡ ಒಂದು ಸಮುದಾಯದ ಮತಗಳಿಂದ ಅಲ್ಲ. ಎಲ್ಲಾ ಸಮುದಾಯದವರು ಮತ ಹಾಕಿದ ಮೇಲೆ ನಾನು ಶಾಸಕನಾಗಿದ್ದೇನೆ. ನಾವು ಪಕ್ಷ ಹಾಗೂ ಪ್ರಹ್ಲಾದ್ ಜೋಶಿ ಪರವಾಗಿ ನಿಲುವು ತೆಗೆದುಕೊಳ್ಳುತ್ತೇವೆ. ಪ್ರಹ್ಲಾದ್ ಜೋಶಿ ಲಿಂಗಾಯತರನ್ನು ಬೆಳೆಸಿದ್ದಾರೆ. ಸಾಕಷ್ಟು ಜನರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಎಲ್ಲಾ ಸಮಾಜಗಳನ್ನು ಜೋಶಿ ಬೆಳೆಸಿದ್ದಾರೆ. ಪೂಜ್ಯರು ಕೂಡ ಸರ್ವಧರ್ಮಗಳನ್ನು ಒಳಗೊಂಡವರು. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ನಾವು ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ. ಶ್ರೀಗಳ ಬಗ್ಗೆ ನಮಗೂ ಅಪಾರ ಗೌರವವಿದೆ. ತಪ್ಪು ತಿಳುವಳಿಕೆಯಾಗಿದ್ದರೆ ಶ್ರೀಗಳ ಜತೆ ಮಾತನಾಡಲು ಸಿದ್ದ ಎಂದರು.
ಜೋಶಿ ಸಮಾಜಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ-ಮಹೇಶ್ ಟೆಂಗಿನಕಾಯಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯಿಸಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧಾರವಾಡ ಕ್ಷೇತ್ರದಲ್ಲಿ ಸಂಸದರಾಗಿ ಉತ್ತಮವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಚುನಾವಣೆಗೆ ನಿಲ್ಲುತ್ತೇನೆಂದು ಎಲ್ಲೂ ಹೇಳಿಲ್ಲ. ಹಾಗೇನಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಪ್ರಹ್ಲಾದ್ ಜೋಶಿ ಅವರು ಯಾವುದು ಸಮಾಜ ಎನ್ನದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಲಿಂಗಾಯತರ ಟಿಕೆಟ್ ವಿಚಾರಕ್ಕೆ ಬಂದರೆ ಏಳು ವಿಧಾನಸಭೆ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಟ್ಟಿದ್ದಾರೆ. ಲಿಂಗಾಯತರಿಗೆ ಯಾವುದೇ ರೀತಿಯ ಅನ್ಯಾಯ ಆಗಿಲ್ಲ. ವಿಶೇಷವಾಗಿ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಮತದಾರರು ಯಾವುದೇ ತಲೆಕೆಡಿಸಿಕೊಳ್ಳುವುದಿಲ್ಲ. ಜಿಲ್ಲೆಯಲ್ಲಿ ಆದ ಅಭಿವೃದ್ಧಿ ಕಾರ್ಯಗಳಿಗೆ ಮತ ನೀಡುತ್ತಾರೆ. ಪ್ರಹ್ಲಾದ್ ಜೋಶಿ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.
ಶ್ರೀಗಳಿಗೆ ರಾಜಕೀಯ ಗೀಳು ತಲೆಗೆ ಹೊಕ್ಕಿದೆ-ಅರವಿಂದ ಬೆಲ್ಲದ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದು, ಶ್ರೀಗಳ ರಾಜಕೀಯ ಪ್ರವೇಶ ಪಕ್ಷದ ಮೇಲೆ ಹಾಗೂ ಪ್ರಹ್ಲಾದ್ ಜೋಶಿಯವರ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ. ಅವರಿಗೆ ರಾಜಕೀಯ ಗೀಳು ತಲೆಯಲ್ಲಿ ಹೊಕ್ಕಿದೆ. ಹೀಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ದೇಶದ ಜನತೆ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡುವ ಸಂಕಲ್ಪ ಮಾಡಿದ್ದಾರೆ. ಇದು ದೇಶದ ಚುನಾವಣೆ, ಇದರಲ್ಲಿಜಾತಿ ಧರ್ಮ ಬರುವುದಿಲ್ಲ. ಸ್ವಾಮೀಜಿಗಳಿಗೆ ಒಂದು ಕಿವಿಮಾತು. ನಮ್ಮ ಸಮಾಜದಲ್ಲಿ ಮಾಡುವಂತಹ ಕೆಲಸ ಕಾರ್ಯಗಳನು ಬಹಳ ಇವೆ. ಸಮಾನತೆ, ಕಾಯಕ ಪರಿಕಲ್ಪನೆ ಮಾಡಲಿ, ರಾಜಕೀಯ ಮಾಡಲು ನಮ್ಮಂಥವರು ಇದ್ದೇವೆ. ರಾಜಕೀಯ ಮಾರ್ಗದರ್ಶನ ಮಾಡಲಿ. ಇಲ್ಲವೇ ಜೋಶಿಯವರು ಒಳ್ಳೆ ಸಂಸದರಿದ್ದಾರೆ, ಅವರಿಗೆ ಸಹಕಾರ ಕೊಡಲಿ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಕಲ್ಯಾಣ ಕರ್ನಾಟಕ ಭಾಗದ ಜವಾಬ್ದಾರಿ ರೆಡ್ಡಿ ಹೆಗಲಿಗೆ ವಹಿಸಿದ ಬಿಜೆಪಿ - Janardhana Reddy