ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಬಿಟ್ಟರೆ ಯಾರೂ ಇದರಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಬಿಟ್ಟರೆ ಯಾರೂ ಮಧ್ಯಪ್ರವೇಶ ಮಾಡಿಲ್ಲ. ಅದರ ಅವಶ್ಯಕತೆ ಯಾರಿಗೂ ಇಲ್ಲ.ನಾನು ಅಥವಾ ಸಿಎಂ ಯಾರಿಗೂ ಸೊಪ್ಪು ಹಾಕಲ್ಲ, ಯಾರೂ ಕೂಡ ಬಂದಿಲ್ಲ. ದರ್ಶನ್ ಸೇರಿ ನಾಲ್ಕು ಜನರನ್ನ ಒಂದು ವಾರ ಕಸ್ಟಡಿಗೆ ಕೇಳಿದ್ದರು. ಆದರೆ, ಎರಡು ದಿನ ಕೊಟ್ಟಿದ್ದಾರೆ. ಅಷ್ಟರಲ್ಲಿ ವಿಚಾರಣೆ ಮುಗಿದರೆ ಜೆಸಿಗೆ ಕೊಡ್ತಾರೆ ಎಂದರು.
ಬಿಜೆಪಿ ಶಾಸಕರ ಸಂಬಂಧಿ ಪ್ರಕರಣದಲ್ಲಿ ಭಾಗಿ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಇದರಲ್ಲಿ ಇರಬಹುದೇನೋ ಗೊತ್ತಿಲ್ಲ. ಪಕ್ಷದ ಆಧಾರದ ಮೇಲೆ ಈ ಕೇಸ್ ನೊಡ್ತಾ ಇಲ್ಲ. ಒಂದು ವೇಳೆ ನಮ್ಮ ಪಕ್ಷದಲ್ಲಿ ಇದ್ದರೂ ತಪ್ಪಿತಸ್ಥರೇ. ಬೇರೆ ಪಕ್ಷದಲ್ಲಿ ಇದ್ದರೂ ತಪ್ಪಿತಸ್ಥರೇ. ಯಾರು ಏನು ತಪ್ಪು ಮಾಡಿದ್ದಾರೆ ಅದರ ಮೇಲೆ ತನಿಖೆ ನಡೆಯುತ್ತದೆ ಎಂದರು.
ನಮ್ಮ ಪೊಲೀಸರು ತಪ್ಪು ಮಾಡಿಲ್ಲ: ನೋಯ್ಡಾದಲ್ಲಿ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಮಫ್ತಿಯಲ್ಲಿ ಹೋಗಿದ್ರು. ಅಲ್ಲಿನ ಪೊಲೀಸರಿಗೆ ಮಾಹಿತಿ ಕೊಡಬೇಕಾಗಿತ್ತು, ಆದ್ರೆ ಕೊಟ್ಟಿಲ್ಲ. ಅಲ್ಲಿನ ಪೊಲೀಸರು ನೋಟಿಸ್ ಕೊಟ್ಟು ತಿಳಿಸಿ ಎಂದು ಹೇಳಿದ್ದಾರೆ. ವಾರಂಟ್ ಇಲ್ಲದೇ ಬಂಧಿಸಬೇಡಿ ಅಂತ ಹೇಳಿದ್ದಾರೆ. ನೋಟಿಸ್ ಕೊಟ್ಟು ಆ ಯೂಟ್ಯೂಬರ್ ಬರದೇ ಇದ್ದರೆ ಬಂಧನ ಮಾಡ್ತಾರೆ. ಕೆಲವು ಸಂದರ್ಭಗಳಲ್ಲಿ ಇಂತಹ ಘಟನೆ ನಡೆಯುತ್ತವೆ. ಅವರು ತಪ್ಪು ಏನೂ ಮಾಡಿಲ್ಲ ಎಂದರು.
ಎಐಸಿಸಿ ಇರುವುದೇ ನಮ್ಮನ್ನು ನಿಯಂತ್ರಿಸಲು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನಕ್ಕೆ ಎಐಸಿಸಿ ಕಮಿಟಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಐಸಿಸಿ ಮಟ್ಟದಲ್ಲಿ ಗೆಲುವಿನ ನಿರೀಕ್ಷೆ ಬೇರೆ ಇತ್ತು. 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಾವು 15 ಸ್ಥಾನ ಗೆಲ್ಲಲಿಲ್ಲ. ಸರ್ಕಾರ ಇದ್ದು ಕೂಡ ಇಷ್ಟೊಂದು ಕಡಿಮೆ ಆಯ್ತು ಅಂತಾ ಆತ್ಮಾವಲೋಕನ ಅಥವಾ ಫ್ಯಾಕ್ಟ್ ಫೈಂಡಿಂಗ್ ಕಮಿಟಿ ರಚನೆ ಮಾಡಿದ್ದಾರೆ. ಎಲ್ಲ ರಾಜ್ಯಕ್ಕೂ ಮಾಡಿದ್ದಾರೆ. ನಮ್ಮ ರಾಜ್ಯಕ್ಕೂ ಮಾಡಿದ್ದಾರೆ ಎಂದರು.