ಶಿವಮೊಗ್ಗ: ಬಿಜೆಪಿಯ ಅನೇಕ ನಾಯಕರು, ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡುತ್ತಿರುವುದನ್ನು ಗಮನಿಸಿ ರಾಘಣ್ಣನ ಬೆಂಬಲಿಗರು ಅವರ ಮನೆಗಳಿಗೆ ತರಳಿ ಈಶ್ವರಪ್ಪನವರ ಪರ ಕೆಲಸ ಮಾಡಬೇಡಿ ಎಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಆ ಕಾರ್ಯಕರ್ತರು, ಇದಕ್ಕೂ ಮುಂಚೆ ನಮ್ಮ ಮನೆಗಳಿಗೆ ರಾಘವೇಂದ್ರ ಆಗಲಿ ನೀವಾಗಲಿ ಭೇಟಿ ಕೊಟ್ಟಿದ್ದೀರಾ?, ಈಗ ನಮ್ಮ ಮನವೊಲಿಸಲು ಬರಬೇಡಿ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಾಗರದಲ್ಲಿಂದು ರಾಷ್ಟ್ರ ಭಕ್ತ ಬಳಗದ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕರ್ತರು ಬಿಜೆಪಿಯನ್ನು ಶುದ್ಧ ಮಾಡಬೇಕೆಂದು ನಿರ್ಧಾರ ಮಾಡಿದ್ದಾರೆ. ಇದಕ್ಕೆ ನಾವು ಕೈ ಜೋಡಿಸಿದ್ದೇವೆ. ಬಿಜೆಪಿಯನ್ನು ಶುದ್ಧ ಮಾಡಿ ಮತ್ತೆ ನಾವೆಲ್ಲರೂ ಬಿಜೆಪಿಗೆ ವಾಪಸ್ ಬರಲಿದ್ದೇವೆ ಎಂಬ ಉತ್ತರವನ್ನು ರಾಘವೇಂದ್ರ ಬೆಂಬಲಿಗರಿಗೆ ಕೊಟ್ಟು ಕಳುಹಿಸಿದ್ದಾರೆ. ರಾಜ್ಯದಲ್ಲಿ ಕುರುಬರಿಗೆ ಒಂದೂ ಸೀಟ್ ಕೊಟ್ಟಿಲ್ಲ. ಎಸ್ಸಿ-ಎಸ್ಟಿ, ಭೋವಿಗಳಿಗೆ ಹೆಚ್ಚು ಸೀಟ್ ಕೊಟ್ಟಿಲ್ಲ. ಹೀಗಾಗಿ ಇವರೆಲ್ಲರೂ ಸಿಟ್ಟಾಗಿದ್ದಾರೆ. ರಾಜ್ಯದಲ್ಲಿ ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೋ ಗೊತ್ತಿಲ್ಲ ಎಂದರು.
ಟಿಕೆಟ್ ಹಂಚಿಕೆಯ ಹೆಚ್ಚು ಜವಾಬ್ದಾರಿಯನ್ನು ಯಡಿಯೂರಪ್ಪನವರೇ ತೆಗೆದುಕೊಂಡಿದ್ದರು. ಇದು ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ ಎಂದು ನಾನು ಅಂದುಕೊಂಡಿದ್ದೇನೆ. ಆದರೂ ನನ್ನ ಆಸೆ ರಾಜ್ಯದ 28 ಕ್ಷೇತ್ರಗಳಲ್ಲಿ ಎನ್ಡಿಎ ಗೆಲ್ಲಬೇಕು ಎಂಬುದು. ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ಈ ಲೋಕಸಭಾ ಕ್ಷೇತ್ರದಲ್ಲಿ ನಾನು ಗೆದ್ದು, ನರೇಂದ್ರ ಮೋದಿಯವರ ಕೈ ಎತ್ತುತ್ತೇನೆ ಎಂದು ಹೇಳಿದರು.
ಮಗ ಸೋಲುತ್ತಾನೆ ಎಂದು ಯಡಿಯೂರಪ್ಪರವರು ನನ್ನ ಮನೆಗೆ ಬರುತ್ತೇನೆ ಎಂದು ಹೇಳುತ್ತಿದ್ದಾರೆ ಅಷ್ಟೇ. ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ನನ್ನ ಮನೆಗೆ ಬರುತ್ತಾರೆ?. ನನಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಬೆಂಬಲ ಸಿಗುತ್ತಿದೆ. ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ. ಏಪ್ರಿಲ್ 12 ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ಅಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಮೆರವಣಿಗೆ ಹೊರಡಿಸಿ ನಾಮಪತ್ರ ಸಲ್ಲಿಕೆ ಮಾಡುತ್ತೆನೆ. ನಾಮಪತ್ರ ಸಲ್ಲಿಕೆಗೆ ವೇಳೆ 25,000 ಕಾರ್ಯಕರ್ತರು ಸೇರುವ ವಿಶ್ವಾಸ ಎಂದರು. ರಾಷ್ಟ್ರಭಕ್ತ ಬಳಗದ ಮುಖಂಡರು ಈ ವೇಳೆ ಇದ್ದರು.
ಇದನ್ನೂ ಓದಿ: ಅಮಿತ್ ಶಾ ಬಂದ ಬಳಿಕ ರಾಜ್ಯದಲ್ಲಿ ಮೋದಿ ಶಕ್ತಿ ಇನ್ನಷ್ಟು ಹೆಚ್ಚಾಗಲಿದೆ: ಆರ್. ಅಶೋಕ್ - R Ashok