ಮೈಸೂರು: ಕಷ್ಟದ ಕಾಲದಲ್ಲಿ ರಾಜ್ಯಾಧ್ಯಕ್ಷೆಯಾಗಿ ಇಡ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಕಟ್ಟಿ, ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಚಾಮರಾಜನಗರ ಕ್ಷೇತ್ರದ ಮಗಳು, ಸೊಸೆಯಾಗಿ ಈ ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು, ಖಂಡಿತ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿದ್ದೇನೆ. ವಿಧಾನಸಭಾ ಚುನಾವಣೆ ವೇಳೆಯೂ ಸಕಲೇಶಪುರ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನನಗೆ ಟಿಕೆಟ್ ಸಿಗಲಿಲ್ಲ. ಹಾಗಂತ ನಾವೇನು ಪಕ್ಷದ ವಿರುದ್ಧ ಹೋಗಿಲ್ಲ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಗೆಲುವೊಂದೇ ನಮಗೆ ಮಾನದಂಡ. ಚಾಮರಾಜನಗರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ಗೆ ಒಳ್ಳೆಯ ವಾತಾವರಣವಿದೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದರು.
ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಅನುಕೂಲತೆಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಮಹಿಳೆಯರಿಗೆ ಕಾಂಗ್ರೆಸ್ ನೀಡುತ್ತಿರುವ ಗ್ಯಾರೆಂಟಿ ಹಣವನ್ನು ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ನಾಯಕರಿಗೆ ಜನರಿಗೆ ಒಳ್ಳೆಯ ಕೆಲಸ ಮಾಡುವ ಮನಸ್ಸಿಲ್ಲ. ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದನ್ನು ನಾವು ನೋಡಿದ್ದೇವೆ. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಜನರ ಕೈಹಿಡಿದಿವೆ. ರಾಜ್ಯದಲ್ಲಿರುವ ಬರ ಪರಿಸ್ಥಿತಿಯನ್ನು ಸಹ ನೋಡದೇ ರೈತರ ಕ್ಷೇಮಾಭಿವೃದ್ಧಿ ಕಾಣದೇ ಹಣವನ್ನು ಕೊಡದೇ ಅನ್ಯಾಯ ಮಾಡಿದೆ ಎಂದರು.
ಮೋದಿ ಗ್ಯಾರೆಂಟಿಗಳ ಪಟ್ಟಿಯ ಪೋಸ್ಟರ್ ತೋರಿಸುವ ಮೂಲಕ ವ್ಯಂಗ್ಯವಾಡಿದ ಪುಷ್ಪಾ ಅಮರನಾಥ್, ಮೋದಿ ಅವರ ಹತ್ತು ವರ್ಷಗಳ ಸಾಧನೆ ಏನೆಂದು ನೋಡಿ. ಕೇವಲ ಬೆಲೆ ಏರಿಕೆ ಹಾಗೂ ಅತಂತ್ರ ಪರಿಸ್ಥಿತಿ ತಂದಿರುವುದೇ ಮೋದಿ ಗ್ಯಾರೆಂಟಿ. ಈ 10 ವರ್ಷದ ಅವಧಿಯಲ್ಲಿ ಮೋದಿಯವರು ಮಾಡಿದ ಒಂದು ಅಭಿವೃದ್ಧಿ ವಿಚಾರ ತಿಳಿಸಿ. ಕೇವಲ ರಾಮ ಮಂದಿರ ಕಟ್ಟುವುದು ಸಾಧನೆಯೇ, ಕಳೆದ ಬಾರಿ ಪುಲ್ವಾಮಾ ದಾಳಿ ವಿಚಾರ ಇಡ್ಕೊಂಡು ಗೆದ್ದರು. ಈ ಬಾರಿ ರಾಮಮಂದಿರ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಈ ರೀತಿ ಭಾವನಾತ್ಮಕ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವುದು ಬಿಜೆಪಿ ಮಾತ್ರ. ಅದಕ್ಕೆ ಸಿ.ಎಂ. ಸಿದ್ದರಾಮಯ್ಯ ಸಾಹೇಬರು ಹೇಳಿದ್ದು ‘ಸುಳ್ಳೇ ಬಿಜೆಪಿ ಮನೆದೇವರು’ ಅಂತ ಪುಷ್ಪಾ ಅಮರನಾಥ್ ಲೇವಡಿ ಮಾಡಿದರು.
ಬೆಲೆ ಏರಿಕೆಗೆ ಪಾಠ ಕಲಿಸಿ: ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಜನರ ಆರ್ಥಿಕ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದೆ. ಪೆಟ್ರೋಲ್, ಡಿಸೇಲ್, ಅಕ್ಕಿ, ಬೇಳೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ದೇಶದ ಮಹಿಳೆಯರ ಪರವಾಗಿ ನಾನು ಬೆಲೆ ಏರಿಕೆ ಕಡಿಮೆ ಮಾಡುವಂತೆ ಆಗ್ರಹಿಸುತ್ತೇನೆ. ಸಾಮಾನ್ಯ ಮಹಿಳೆಯರ ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರೇ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಮೇಯರ್ ಮೋದಾಮಣಿ, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಲತಾಸಿದ್ದಶೆಟ್ಟಿ ಅವರು ಮಾಧ್ಯಮಗೋಷ್ಠಿಯಲ್ಲಿದ್ದರು.
ಓದಿ: ರಾಜ್ಯಸಭಾ ಚುನಾವಣೆ ಮುನ್ನ ಸಿಎಂ, ಡಿಸಿಎಂ ಭೇಟಿಯಾದ ಜನಾರ್ದನ ರೆಡ್ಡಿ