ಬೆಂಗಳೂರು : ಕೋಲಾರದಲ್ಲಿ 13 ವರ್ಷಗಳ ಹಿಂದೆ ಎರಡು ನಿವೇಶನಗಳ ಮಾರಾಟ ವಿಚಾರದಲ್ಲಿ ಮುದ್ರಾಂಕ ಶುಲ್ಕ ಪಾವತಿಸದ ಹಿನ್ನೆಲೆ ಆ ಜಮೀನಿನ ದಾಖಲೆಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಮೆಹಬೂಬ್ ಮುನಾವರ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಆಲಿಸಿದ ನ್ಯಾಯಮೂರ್ತಿಗಳಾದ ಎಸ್. ಜಿ ಪಂಡಿತ್ ಮತ್ತು ನ್ಯಾಯಮೂರ್ತಿ ಸಿ. ಎಂ ಪೂಣಚ್ಚ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ನಿವೇಶನ ಮಾರಾಟದ ಕ್ರಯಪತ್ರದ ದಾಖಲೆಯನ್ನು ಕೇವಲ 2 ರೂಪಾಯಿ ಮೌಲ್ಯದ ಕಾಗದದಲ್ಲಿ ಮುದ್ರಿಸಲಾಗಿದೆ. ಅದಕ್ಕೆ ಮುದ್ರಾಂಕ ಶುಲ್ಕ ಪಾವತಿಸಿಲ್ಲ ಎಂಬ ಸಂಗತಿ ಕಂಡು ಬಂದಿದೆ ಎಂದು ಪೀಠ ತಿಳಿಸಿದೆ.
ಕರಾರು ಒಪ್ಪಂದಕ್ಕೆ ಮುದ್ರಾಂಕ ಶುಲ್ಕ ಪಾವತಿಸಿಲ್ಲ. ಹಾಗಾಗಿ ಆ ದಾಖಲೆಯನ್ನು ವಶಕ್ಕೆ ಪಡೆದುಕೊಳ್ಳಬೇಕು. ಒಪ್ಪಂದವನ್ನು ಪರಿಶೀಲಿಸಿ ಅದಕ್ಕೆ ಎಷ್ಟು ಶುಲ್ಕ ಪಾವತಿಸಬೇಕು ಮತ್ತು ಅದಕ್ಕೆ ಎಷ್ಟು ದಂಡ ಶುಲ್ಕ ಪಾವತಿಸಬೇಕು ಎಂಬುದನ್ನು ಜಿಲ್ಲಾಧಿಕಾರಿ ನಿರ್ಧರಿಸಬೇಕು ಎಂದು ಪೀಠ ಹೇಳಿದೆ. ಅಲ್ಲದೇ, ನ್ಯಾಯಾಲಯ ಗುಪ್ತಾ ಅವರು ನೀಡಿದ್ದ 50 ಸಾವಿರ ರೂ. ಹಣವನ್ನು ಒಪ್ಪಂದ ಮಾಡಿಕೊಂಡ ದಿನದಿಂದ ಶೇ.12ರ ಬಡ್ಡಿ ದರ ಸೇರಿಸಿ ಪಾವತಿ ಮಾಡಬೇಕು ಎಂದು ಆದೇಶಿಸಿತು.
ಪ್ರಕರಣದ ಹಿನ್ನೆಲೆ : ಬೆಂಗಳೂರಿನ ಮೆಹಬೂಬ್ ಮುನಾವರ್ 2010 ರ ಅ. 18 ರಂದು ಕೋಲಾರದವರೇ ಆದ ಅಶ್ವತ್ಥ್ ನಾರಾಯಣ ಗುಪ್ತ ಎಂಬುವರಿಗೆ ಕೋಲಾರದಲ್ಲಿನ ಎರಡು ನಿವೇಶನಗಳನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಆ ನಿವೇಶನಗಳನ್ನು 36.5 ಲಕ್ಷ ರೂ.ಗಳಿಗೆ ಖರೀದಿಸಲು ಉದ್ದೇಶಿಸಿ ಒಪ್ಪಂದ ಮಾಡಿಕೊಂಡು 50 ಸಾವಿರ ಮುಂಗಡ ಹಣ ನೀಡಿದ್ದರು.