ಗಂಗಾವತಿ: ಪಂಚಾಯಿತಿಯಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಉಪಾಧ್ಯಕ್ಷೆಯೊಬ್ಬರನ್ನು ಸ್ಥಾನದಿಂದ ತೆಗೆದುಹಾಕಿ ಸದಸ್ಯತ್ವ ರದ್ದು ಮಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
![Hanavala Panchayat news](https://etvbharatimages.akamaized.net/etvbharat/prod-images/13-06-2024/kn-gvt-01-12-hanval-panchayth-wp-suspend-and-disqulified-pic-kac10005_12062024201903_1206f_1718203743_1080.jpg)
ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಣವಾಳ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ನಂದಿನಿ ವೆಂಕಟೇಶ ಭೋವಿ ಅವರನ್ನು ಅನರ್ಹಗೊಳಿಸಲಾಗಿದೆ. ಅಲ್ಲದೇ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ನಿಲ್ಲದಂತೆ ಅನರ್ಹತೆ ಮಾಡಲಾಗಿದೆ. ಸರ್ಕಾರ ಮತ್ತು ಇಲಾಖೆಯ ನಿಯಮಗಳನ್ನು ಮೀರಿ ಹಣಕಾಸು ಅವ್ಯವಹಾರಕ್ಕೆ ಸಾಥ್ ನೀಡಿರುವ ಈ ಪ್ರಕರಣದ ಪ್ರಮುಖ ರೂವಾರಿ ಎನ್ನಲಾಗುತ್ತಿರುವ ನಿರ್ಗಮಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯು. ಮಲ್ಲಿಕಾರ್ಜುನ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವ ಇಲಾಖೆ, ದುರುಪಯೋಗವಾಗಿರುವ ಹಣದ ಅರ್ಧ ಮೊತ್ತ ವಸೂಲಿ ಮಾಡುವಂತೆ ಸೂಚಿಸಲಾಗಿದೆ.
ಹಣವಾಳ ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷೆ ಯಂಕಮ್ಮ ಈರಣ್ಣ ಕುರಿ ಸಲ್ಲಿಸಿದ ದೂರಿನ ಮೇರೆಗೆ ವಿಚಾರಣೆ ಕೈಗೊಂಡ ಇಲಾಖೆಯ ಅಧಿಕಾರಿಗಳಿಗೆ ಹಣಕಾಸು ಅಕ್ರಮ ನಡೆದಿರುವುದು ಗೋಚರಿಸಿದ ಹಿನ್ನೆಲೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದರು. ಈ ಹಿನ್ನೆಲೆ ಇದೀಗ ಕ್ರಮವಾಗಿದೆ.
ಘಟನೆಯ ವಿವರ: ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ 2021-22 ಹಾಗೂ 2022-23ನೇ ಸಾಲಿನಲ್ಲಿ ಖಾಸಗಿ ಸಂಸ್ಥೆಗಳ ಹೆಸರು ಸೂಚಿಸಿ ಆಗಿನ ಅಧ್ಯಕ್ಷೆಯಾಗಿದ್ದ ನಂದಿನಿ, ತಮ್ಮ ಸಂಬಂಧಿಕರ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಸರ್ಕಾರದ ಅನುದಾನ ಹೊರತುಪಡಿಸಿ ಕರವಸೂಲಿಯಲ್ಲಿ ಈ ಕಾಮಗಾರಿಗಳಿಗೆ ಹಣ ಸಂದಾಯ ಮಾಡಲು ಅವಕಾಶವಿಲ್ಲದ್ದರ ಮಧ್ಯೆಯೂ ನಿಯಮಬಾಹಿರವಾಗಿ ಪಿಡಿಒ ಮಲ್ಲಿಕಾರ್ಜುನ್ ಜೊತೆ ಶಾಮೀಲಾಗಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಯಂಕಮ್ಮ ದೂರು ದಾಖಲಿಸಿದ್ದರು.
ಇದನ್ನೂ ಓದಿ: ವಿಜಯಪುರದಲ್ಲಿ ವರುಣಾರ್ಭಟ: ಕುಸಿದ ಬೃಹತ್ ಬಾವಿ ಗೋಡೆ, ರೈತ ಕಂಗಾಲು - Well Wall Collapsed
ಓವರ್ ಲ್ಯಾಪಿಂಗ್: 2021-22 ಹಾಗೂ 2022-23ನೇ ಸಾಲಿನ ಕರವಸೂಲಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಹೂಳೆತ್ತುವುದು, ರಸ್ತೆಗೆ ಮರಂ ಹಾಕುವುದು, ಪೈಪ್ಲೈನ್ ದುರಸ್ತಿ, ಪೈಪ್ಲೈನ್ ಸಾಮಗ್ರಿ ಖರೀದಿ ಎಂದು ವೆಚ್ಚ ತೋರಿಸಲಾಗಿದೆ. ಆದರೆ, ಇದ್ಯಾವುದಕ್ಕೂ ಹಣ ಖರ್ಚು ಮಾಡಿಲ್ಲ. ಅಲ್ಲದೇ ಇದೇ ಕಾಮಗಾರಿಗಳಿಗೆ ಕರವಸೂಲಿಯ ಅನುದಾನವನ್ನು ಬಳಕೆ ಮಾಡಿಕೊಂಡಿದ್ದರ ಬಗ್ಗೆ ಪಂಚಾಯಿತಿಯಲ್ಲಿ ದಾಖಲೆ ಸೃಷ್ಟಿಸಲಾಗಿದೆ. ಆದರೆ ಯಾವುದೇ ಕಾಮಗಾರಿ ನಡೆದಿಲ್ಲ. ಓವರ್ ಲ್ಯಾಪಿಂಗ್ ಆಗಿದೆ ಎಂದು ಮೇಲಧಿಕಾರಿಗಳಿಗೆ ಸಲ್ಲಿಸಿರುವ ವರದಿಯಲ್ಲಿ ತಾಲೂಕು ಪಂಚಾಯಿತಿ ಇಒ ಉಲ್ಲೇಖಿಸಿದ್ದಾರೆ.
ಅನರ್ಹತೆ ಆದೇಶ: ಅಧಿಕಾರಿಗಳು ಸಲ್ಲಿಸಿದ ಹಣಕಾಸು ಅಕ್ರಮದ ವರದಿ ಶಿಫಾರಸಿನ ಮರೆಗೆ ಹಣವಾಳ ಗ್ರಾಮ ಪಂಚಾಯಿತಿಯ ಆಗಿನ ಅಧ್ಯಕ್ಷೆ ಹಾಲಿ ಉಪಾಧ್ಯಕ್ಷೆ ನಂದಿನಿ ಅವರನ್ನು ಹುದ್ದೆಯಿಂದ ಅರ್ನಹತೆ ಮಾಡಿ ಹಾಗೂ ಸದಸ್ಯತ್ವದಿಂದ ಅರ್ನಹತೆಗೊಳಿಸಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ ಮಾಡಿದ್ದಾರೆ.