ಕಾರವಾರ: ''ಪರಿಹಾರ ಕಾರ್ಯದಲ್ಲಿ ಕೇಂದ್ರ ರಾಜ್ಯ ಎಂದು ರಾಜಕಾರಣ ಮಾಡಬಾರದು. ನೊಂದ ಕುಟುಂಬಗಳಿಗೆ ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಡಬೇಕು'' ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿದ ಸ್ಥಳಕ್ಕೆ ಶನಿವಾರ ಅವರು ಜಿಲ್ಲಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗುಡ್ಡ ಕುಸಿತ, ಪರಿಹಾರ ಕಾರ್ಯ, ನೊಂದವರಿಗೆ ನೆರವು, ಹೆದ್ದಾರಿಯಲ್ಲಿ ಮಣ್ಣು ತೆರವು, ಗಂಗಾವಳಿ ನದಿ ಪ್ರವಾಹ ಹಾಗೂ ಮಳೆ ಪರಿಸ್ಥಿತಿಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮಳೆಯ ನಡುವೆಯೇ ಗುಡ್ಡ ಕುಸಿತ ಭೀಕರತೆಯನ್ನು ವೀಕ್ಷಿಸಿದ ಸಚಿವರು, ಮಣ್ಣು ತೆರವು ಮತ್ತಿತರೆ ಪರಿಹಾರ ಕಾರ್ಯಗಳ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಶಿರೂರು ಭಾಗದಲ್ಲಿ ಕುಸಿದಿರುವ ಗುಡ್ಡ ದೊಡ್ಡಮಟ್ಟದ್ದಾಗಿದೆ. ಒಂದೇ ಕುಟುಂಬದಲ್ಲಿ ಐವರು, ಇನ್ನೂ ಇಬ್ಬರು ಈ ದುರಂತದಲ್ಲಿ ಜೀವ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಎಲ್ಲರೂ ಶ್ರಮ ಜೀವಿಗಳು. ಇಬ್ಬರು ಮಕ್ಕಳು ಬಲಿಯಾಗಿರುವುದು ದುಃಖ ತಂದಿದೆ'' ಎಂದರು.
''ರಾಜ್ಯ ಸರ್ಕಾರವು ಗುಡ್ಡ ಕುಸಿತದಲ್ಲಿ ಜೀವ ಕಳೆದುಕೊಂಡಿರುವ ಕುಟುಂಬಗಳ ಜೊತೆ ನಿಲ್ಲಬೇಕು. ಪರಿಹಾರ ವಿಚಾರದಲ್ಲಿ ರಾಜಕಾರಣ ಸರಿಯಲ್ಲ. ಕೇಂದ್ರ ಸರ್ಕಾರ ಕೂಡ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸವನ್ನು ಮಾಡಬೇಕು. ರಾಜಕೀಯದಿಂದ ಉಪಯೋಗ ಇಲ್ಲ. ಮನೆಗಳನ್ನು ಕಳೆದುಕೊಂಡವರಿಗೆ ಮರು ವಸತಿ ಕಲ್ಪಿಸಬೇಕು'' ಎಂದು ತಿಳಿಸಿದರು.
''ಯಾಕೆ ಈ ದುರಂತ ಸಂಭವಿಸಿತು? ಕಾರಣಗಳು ಏನು? ಕಾಮಗಾರಿಯಲ್ಲಿ ಸಮಸ್ಯೆ ಇದೆಯಾ? ಎಂಬ ಪರಿಶೀಲನೆ ನಡೆಸಲಾಗುವುದು ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೂ ತರಲಾಗುವುದು. ಮೊದಲು ಪರಿಹಾರ ಕಾರ್ಯ ಮುಗಿಯಲಿ. ಇದರಲ್ಲಿ ರಾಜಕೀಯ ಮಾಡುವುದು ಬೇಡ'' ಎಂದು ಅವರು ಮನವಿ ಮಾಡಿದರು.
ಈ ಘಟನೆ ಪರಿಹಾರ ಕಾರ್ಯ ವಿಳಂಬವಾಗಿ ಸಾಗುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ಈ ಬಗ್ಗೆ ನಾನು ಅಧಿಕಾರಿಗಳಿಗೆ ದೋಷ ಕೊಡಲಾರೆ. ಅವರು ಮಳೆಯ ನಡುವೆಯೂ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ದುರಂತ ಊಹೆಗೂ ನಿಲುಕದ್ದು. ಜನತೆಗೆ ಮೂಲಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ಇಂಥ ಘಟನೆಗಳು ಮರುಕಳಿಸುತ್ತಿವೆ'' ಎಂದು ಹೆಚ್ಡಿಕೆ ಹೇಳಿದರು.
ರಾಜ್ಯ ಸರ್ಕಾರದ ಯಾವೊಬ್ಬ ಸಚಿವರು, ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡದಿರುವ ಬಗ್ಗೆ ಸ್ಥಳೀಯರಿಗೆ ಬೇಸರವಿದೆ ಎಂದು ಮಾಧ್ಯಮದವರು ಕೇಳಿದಾಗ, ''ಈ ಬಗ್ಗೆ ನಾನು ಚರ್ಚೆ ನಡೆಸಲಾರೆ. ನಾನು ಬಂದಿದ್ದೇನೆ. ಕೇಂದ್ರದಿಂದ ಏನು ಸಹಾಯ ಮಾಡಿಸಬಹುದೋ ಅದನ್ನು ಮಾಡಿಸುತ್ತೇನೆ. ಇಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳದ್ದು ಜವಾಬ್ದಾರಿ ಇದೆ'' ಎಂದು ಉತ್ತರಿಸಿದರು.
''ಭಾರೀ ಮಳೆಯಿಂದ ಹಾಸನ, ಮಂಗಳೂರು, ಚಿಕ್ಕಮಗಳೂರು, ಕೊಡಗು ಸೇರಿ ಕರಾವಳಿ ಮಲೆನಾಡು ಭಾಗದಲ್ಲಿ ಕೃಷಿ ಬೆಳೆ ನಷ್ಟವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು'' ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಮುಂದುವರೆದ ಕಾರ್ಯಾಚರಣೆ; ನಾಳೆ ಸಿಎಂರಿಂದ ಸ್ಥಳ ವೀಕ್ಷಣೆ - Mankal Vaidya