ದಾವಣಗೆರೆ: ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಅಡಕೆ ತೋಟಕ್ಕೆ ನುಗ್ಗಿರುವ ಕಳ್ಳರು ಐದಾರು ಕ್ವಿಂಟಾಲ್ ಹಸಿ ಅಡಕೆಯನ್ನು ಅಡಕೆ ಮರದಲ್ಲೇ ಕೊಯ್ದು ಹೊತ್ತೊಯ್ದಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಗುರುವಾರ ರಾತ್ರಿ ತೋಟಕ್ಕೆ ನುಗ್ಗಿರುವ ಅಡಕೆ ಕಳ್ಳರು ಐದಾರು ಕ್ವಿಂಟಾಲ್ ಹಸಿ ಅಡಕೆ ಕಳುವು ಮಾಡಿದ್ದಾರೆ. ಮಾಯಕೊಂಡದ ರೈತ ಬಸವರಾಜಯ್ಯ ಅವರ ತೋಟಕ್ಕೆ ಕಳ್ಳರು ಕನ್ನ ಹಾಕಿದ್ದು, ಫಸಲಿಗೆ ಬಂದಿದ್ದ ಹಸಿ ಅಡಕೆಯನ್ನು ಮರವೇರಿ ಕೊಯ್ದುಕೊಂಡು ಹೋಗಿದ್ದಾರೆ.
ಅಡಕೆ ಕಳ್ಳತನ ಮಾಡುವ ಅವಸರದಲ್ಲಿ ಕುಡುಗೋಲು, ಐವತ್ತು ಕೆಜಿಯಷ್ಟು ಅಡಕೆಯನ್ನು ತೋಟದಲ್ಲಿ ಬಿಟ್ಟು ಹೋಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೈತ ಬಸವರಾಜಯ್ಯ ಕಷ್ಟಪಟ್ಟು ಸಾಲ ಸೋಲ ಮಾಡಿ ಅಡಕೆ ಬೆಳೆದಿದ್ದರು. ಅಡಕೆ ಕೂಡ ಫಸಲಿಗೆ ಬಂದಿತ್ತು. ಇದನ್ನು ಮೊದಲೇ ಗಮನಿಸಿದ ಕಳ್ಳರು ಅಡಕೆ ಕದ್ದಿದ್ದಾರೆ.
ಈ ಘಟನೆ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. "ಬೆಳಗ್ಗೆ ವಾಕ್ಗೆ ಬರುವ ಜನ ನನ್ನ ಗಮನಕ್ಕೆ ತಂದಿದ್ದರು. ಈ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಐದಾರು ಕ್ವಿಂಟಾಲ್ ಅಡಕೆ ಕಳ್ಳತನ ಆಗಿದೆ. ಐವತ್ತು ಕೆಜಿ ಅಡಕೆ ತೋಟದಲ್ಲಿ ಬಿಟ್ಟು ಹೋಗಿದ್ದಾರೆ. ಈ ಹಿಂದೆ ತೋಟದಲ್ಲಿ ಎರಡು ಬಾರಿ ಕಳ್ಳತ ಆಗಿತ್ತು. ಇದೀಗ ದೂರು ದಾಖಲು ಮಾಡಿದ್ದೇನೆ" ಎಂದು ಅಡಕೆ ಮಾಲೀಕ ಬಸವರಾಜಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಚ್ಚಿನಿಂದ ಪತ್ನಿಯ ಬರ್ಬರ ಹತ್ಯೆ, ಆರೋಪಿ ಪತಿ ಬಂಧನ