ಬೆಂಗಳೂರು: ಮುಬಾರತ್(ದಂಪತಿ ಪರಸ್ಪರ ಒಪ್ಪಿಗೆ) ಒಪ್ಪಂದ ಮಾಡಿಕೊಂಡು ವಿವಾಹ ರದ್ದು ಮಾಡಿಕೊಳ್ಳಲು ಪರಸ್ಪರ ನಿರ್ಧರಿಸಿಕೊಂಡಿರುವ ಮುಸ್ಲಿಂ ದಂಪತಿಗೆ ವಿವಾಹ ವಿಚ್ಚೇದನ ಮಂಜೂರು ಮಾಡುವ ಅಧಿಕಾರ ಕೌಟುಂಬಿಕ ನ್ಯಾಯಾಲಯಕ್ಕಿದೆ ಎಂದು ಹೈಕೋರ್ಟ್ ಹೇಳಿದೆ.
ಶಬನಂ ಫರ್ವೀನ್ ಅಹಮದ್ ದಂಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ದಂಪತಿ ಮುಬಾರತ್ ಒಪ್ಪಂದ ಮಾಡಿಕೊಂಡಂತೆ ಅವರ ವಿವಾಹವನ್ನು ಅನೂರ್ಜಿತಗೊಳಿಸಿದೆ.
ದಂಪತಿ ಜತೆ ಚರ್ಚಿಸಿದ ಬಳಿಕ ನ್ಯಾಯಪೀಠ, ಇಬ್ಬರೂ ಚೆನ್ನಾಗಿ ತಿಳಿದೇ ಮುಬಾರತ್ ಒಪ್ಪಂದ ಮಾಡಿಕೊಂಡಿದ್ದಾರೆ ಮತ್ತು ಪರಸ್ಪರ ಸಮ್ಮತಿ ಮೇರೆಗೆ ಸಂಬಂಧ ಮುಂದುವರಿಸದಿರಲು ನಿರ್ಧರಿಸಿದ್ದಾರೆ. ಹಾಗಾಗಿ ಕೌಟುಂಬಿಕ ನ್ಯಾಯಾಲಯ ಅವರ ಅರ್ಜಿಯನ್ನು ಮಾನ್ಯ ಮಾಡದೆ ತಪ್ಪೆಸಗಿದೆ ಎಂದು ಪೀಠ ತಿಳಿಸಿದೆ.
ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ ಸೆಕ್ಷನ್ 7ರ ಪ್ರಕಾರ ಯಾವುದೇ ವ್ಯಕ್ತಿಯ ಮದುವೆ ಸಿಂಧುತ್ವವನ್ನು ನಿರ್ಧರಿಸುವ ಅಧಿಕಾರ ಕೌಟುಂಬಿಕ ನ್ಯಾಯಾಲಯಕ್ಕೆ ಇದೆ. ಈ ಪ್ರಕರಣದಲ್ಲಿ ದಂಪತಿ ನಡುವೆ ಪರಸ್ಪರ ಆಗಿರುವ ಮುಬಾರತ್ ಒಪ್ಪಂದದಂತೆ ಮದುವೆಯನ್ನು ಅನೂರ್ಜಿತಗೊಳಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ದಂಪತಿ ಪರಸ್ಪರ ಸಮ್ಮತಿ ಮೇರೆಗೆ ಮದುವೆಯನ್ನು ಅನೂರ್ಜಿತಗೊಳಿಸಲು ಒಪ್ಪಂದ ಮಾಡಿಕೊಂಡಿರುವಾಗ ಕೌಟುಂಬಿಕ ನ್ಯಾಯಾಲಯ ಅವರ ಅರ್ಜಿಯನ್ನು ಮಾನ್ಯ ಮಾಡಿ ಮದುವೆಯನ್ನು ರದ್ದುಗೊಳಿಸಬೇಕಿತ್ತು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮುಸ್ಲಿಂ ವಿವಾಹ ರದ್ದತಿ ಕಾಯಿದೆ 1937, ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯಿಸುವ ಕಾಯಿದೆ 1939 ಮತ್ತು ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ 1984ರ ಸೆಕ್ಷನ್ 7ರ ಅನ್ವಯ ಮುಬಾರತ್ ಒಪ್ಪಂದ ಮಾಡಿಕೊಂಡಿದ್ದರೆ ಅದನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿ, ಮದುವೆಯನ್ನು ಅನೂರ್ಜಿತಗೊಳಿಸಬೇಕು. ಆದರೆ ಕೌಟುಂಬಿಕ ನ್ಯಾಯಲಯ ಅರ್ಜಿ ತಿರಸ್ಕರಿಸಿರುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ: ಈ ದಂಪತಿ 2019ರ ಏ.7ರಂದು ಉತ್ತರಪ್ರದೇಶದ ಅಲಾಹಾಬಾದ್ನ ಕರ್ಬಾಲದ ನಂದ ಗಾರ್ಡನ್ನಲ್ಲಿ ನಡೆದಿದ್ದ ವಿವಾಹವನ್ನು ರದ್ದುಗೊಳಿಸುವಂತೆ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಅದರ ಜತೆಗೆ ಮೊಹಮ್ಮದೀಯ ಸಂಪ್ರದಾಯಂತೆ ಮದುವೆ ರದ್ದುಗೊಳಿಸಿಕೊಳ್ಳಲು 2021ರ ಏ.3ರಂದು ಮಾಡಿಕೊಂಡಿದ್ದ ಮುಬಾರತ್ ಡೀಡ್ ಸಲ್ಲಿಸಿದ್ದರು.
ಆದರೆ ಕೌಟುಂಬಿಕ ನ್ಯಾಯಾಲಯ, ಮುಬಾರತ್ ಮದುವೆಯನ್ನು ರದ್ದುಗೊಳಿಸಲು ಒಂದು ವಿಧಾನವಾಗಿದೆ. ಆದರೆ ಮುಸ್ಲಿಂ ವಿವಾಹ ರದ್ದತಿ ಕಾಯಿದೆ 1937ರ ಪ್ರಕಾರ ಪರಸ್ಪರ ಸಮ್ಮತಿಯ ಮೇರೆಗೆ ಮೊಹಮ್ಮದೀಯ ಮದುವೆಯನ್ನು ರದ್ದು ಮಾಡಲು ಅವಕಾಶವಿಲ್ಲ. ಹಾಗಾಗಿ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ದಂಪತಿ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು.