ಕಾರವಾರ(ಉತ್ತರ ಕನ್ನಡ): ನೂರಾರು ವರ್ಷಗಳ ಇತಿಹಾಸವಿರುವ ಕಾರವಾರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ ಕೋಟ್ಯಂತರ ರೂಪಾಯಿ ಅವ್ಯವಹಾರ ಬಯಲಾಗಿ ಹತ್ತು ದಿನಗಳೇ ಕಳೆದಿದೆ. ಗ್ರಾಹಕರು ಪ್ರತಿನಿತ್ಯ ಪಾಸ್ಬುಕ್ ಹಿಡಿದು ತಮ್ಮ ಹಣಕ್ಕಾಗಿ ಬ್ಯಾಂಕ್ ಎದುರು ಜಮಾಯಿಸುತ್ತಿದ್ದು, ಇಟ್ಟ ಹಣ ಮಾತ್ರ ಕೈ ಸೇರದಂತಾಗಿದೆ. ಆದರೆ ಬೆಳಗಾವಿಯ ಸಹಕಾರಿ ಸಂಘಗಳ ಜಂಟಿ ನಿಬಂಧಕರು ದಾಖಲೆಗಳ ಪರಿಶೀಲನೆಗೆ ಬ್ಯಾಂಕ್ಗೆ ಆಗಮಿಸಿದ್ದ ವೇಳೆ, ಗ್ರಾಹಕರು ತಮ್ಮ ಹಣ ನೀಡುವಂತೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರತಿಷ್ಠಿತ 112 ವರ್ಷಗಳ ಇತಿಹಾಸವಿರುವ ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಈ ಹಿಂದೆ ಮ್ಯಾನೇಜರ್ ಆಗಿದ್ದ ಗುರುದಾಸ್ ಬಾಂದೇಕರ್ ಎಂಬವರು 54 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದು, ಆಡಿಟ್ ವೇಳೆ ಬಯಲಾಗಿತ್ತು. ಆದರೆ, ಈ ಅವ್ಯವಹಾರ ಬಯಲಾಗುವ ಮೊದಲೇ ಅಂದರೆ ಒಂದು ವರ್ಷದ ಹಿಂದೆ ಗುರುದಾಸ್ ಬಾಂದೇಕರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಕಳೆದ ಕೆಲ ದಿನಗಳ ಹಿಂದೆ ವಿಷಯ ಬೆಳಕಿಗೆ ಬರುತ್ತಿದ್ದಂತೆ ಆಡಳಿತ ಮಂಡಳಿ ಈ ಅವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡು ಪ್ರಕರಣವನ್ನು ದಾಖಲಿಸಲಾಗಿದೆ.
ಈ ವಿಚಾರ ತಿಳಿಯುತ್ತಲೇ ಅರ್ಬನ್ ಬ್ಯಾಂಕ್ ಗ್ರಾಹಕರು ಕಂಗಾಲಾಗಿದ್ದು, ತಮ್ಮ ಖಾತೆಗಳಲ್ಲಿದ್ದ ಹಣವನ್ನು ವಾಪಸ್ ಪಡೆಯೋದಕ್ಕೆ ಮುಂದಾಗಿದ್ದಾರೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬ್ಯಾಂಕ್ಗೆ ಆಗಮಿಸುತ್ತಿರುವ ಗ್ರಾಹಕರು ತಮ್ಮ ಹಣಕ್ಕಾಗಿ ಬ್ಯಾಂಕ್ ಸಿಬ್ಬಂದಿ ಬಳಿ ಗೋಳಾಡತೊಡಗಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಆಡಳಿತ ಮಂಡಳಿ, ಗ್ರಾಹಕರು ಹೆದರುವ ಅಗತ್ಯತೆ ಇಲ್ಲ. ಹಣವನ್ನು ಹಂತ ಹಂತವಾಗಿ ಮರಳಿಸುವುದಾಗಿ ತಿಳಿಸಿದೆ.