ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (ETV Bharat) ಬೆಂಗಳೂರು : ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕರಾಗಲು ಯಾರೂ ಗತಿ ಇರಲಿಲ್ಲ. ಹಾಗಾಗಿ ಆರ್. ಅಶೋಕ್ರನ್ನ ನೇಮಕ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರದ ಸಚಿವ ಜಿ. ಪರಮೇಶ್ವರ್ ನಿವಾಸದ ಬಳಿ ಮಾತನಾಡಿದ ಅವರು, ರಾಜ್ಯದಲ್ಲಿ ಅಸಮರ್ಥ ವಿರೋಧ ಪಕ್ಷದ ನಾಯಕ ಇದ್ರೆ ಅದು ಅಶೋಕ್ ಅವರು. ದೇವೇಗೌಡರು, ಎಸ್. ಆರ್ ಬೊಮ್ಮಾಯಿಯಂತವರು ವಿರೋಧ ಪಕ್ಷದ ನಾಯಕರಾಗಿದ್ರು. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕರಾಗಲು ಯಾರೂ ಗತಿ ಇರಲಿಲ್ಲ. ಹಾಗಾಗಿ ಅಶೋಕ್ರನ್ನ ನೇಮಕ ಮಾಡಿದ್ದಾರೆ ಎಂದು ಟೀಕಿಸಿದರು.
''ನಮ್ಮ ಪಕ್ಷದ ವಿಚಾರವನ್ನು ನಾವು ಬಗೆಹರಿಸಿಕೊಳ್ತೇವೆ. ಹಾಲಿನ ದರ ಏರಿಕೆಗೆ ಸಿಎಂ ಇವರಿಗೆ ಅರ್ಜಿ ಕೊಡಬೇಕಾ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ರೈತರ ಕಷ್ಟ ಇವರಿಗೆ ಏನು ಗೊತ್ತು?. ಮತ್ತೊಂದು ವಿಕೆಟ್ ಬೀಳಿಸುವುದಾಗಿ ಅಶೋಕ್ ಹೇಳಿದ್ದಾರೆ. ಅಶೋಕ್ ನಿಮ್ಮನ್ನು ಫೀಲ್ಡ್ಗಿಳಿಯಲೂ ಬಿಡಲ್ಲ. ಆರ್. ಅಶೋಕ್ ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡ್ತಾರೆ. ನಿತೀಶ್ ಕುಮಾರ್ಗೆ ವಿಶೇಷ ಪ್ಯಾಕೇಜ್ ವಿಚಾರವಾಗಿ ಚಂದ್ರಬಾಬು ನಾಯ್ಡು ಅಸಮಾಧಾನಗೊಂಡಿದ್ದಾರೆ. ಎನ್ಡಿಎ ಮೈತ್ರಿ ಕೂಟವನ್ನು ಹಿಡಿದಿಟ್ಟುಕೊಳ್ಳಲಿ'' ಎಂದು ಹೇಳಿದರು.
'''ವಿರೋಧ ಪಕ್ಷದ ನಾಯಕನ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಅಶೋಕ್ , ಸಿದ್ದರಾಮಯ್ಯನವರ ಹತ್ರ ಕೋಚಿಂಗ್ ತೆಗೆದುಕೊಳ್ಳಲಿ. ಹಲವು ಗಂಭೀರವಾದ ವಿಚಾರಗಳು ಇವೆ. ಅವುಗಳ ಬಗ್ಗೆ ಮಾತನಾಡಲಿ. ನಾವು ನಾಲ್ಕು ವರ್ಷ ಅವರನ್ನು ನೋಡಬೇಕು. ಗಂಭೀರ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಿ. ವೈಯಕ್ತಿಕವಾಗಿ ಮಾತನಾಡುವುದು ಬಿಡಲಿ'' ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ : ಸರ್ಕಾರಿ ಕಾರ್ಯಕ್ರಮದಲ್ಲೇ ಸಿಎಂ ರಾಜೀನಾಮೆ ಬೇಡಿಕೆ, ಸಿದ್ದರಾಮಯ್ಯ ರಾಜೀನಾಮೆ ಕೊಡುವುದೇ ಸೂಕ್ತ: ಆರ್ ಅಶೋಕ್ - R Ashok On Swamiji CM Statement