ಹುಬ್ಬಳ್ಳಿ: ಉಪಚುನಾವಣೆಗೆ ಬಹಳ ತಯಾರಿ ಮಾಡಿದ್ದೇವೆ. ನಮಗೆ ಮೂರೂ ಕ್ಷೇತ್ರದಲ್ಲಿ ಜನ ಆಶೀರ್ವಾದ ಮಾಡ್ತಾರೆ. ಭಾವನಾತ್ಮಕವಾಗಿ ಮಾತನಾಡೋದು, ಅಳೋದು ನೋಡಿ ಸಾಕಾಗಿದೆ. ಇದನ್ನೆಲ್ಲ ಜನ ನೋಡಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಭಾಷಣದ ಕುರಿತು ಪ್ರತಿಕಿಯಿಸಿ, ಭಾವನಾತ್ಮಕ ಹೇಳಿಕೆಗೆ ಜನರು ಕರಗುವುದಿಲ್ಲ ಎಂದರು.
ಶಿಗ್ಗಾಂವಿಯಲ್ಲಿ ಬಂಡಾಯವಾಗಿ ಅಜ್ಜಂಪೀರ್ ಖಾದ್ರಿ ನಾಮಪತ್ರ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯಿಸಿ, ಪಠಾಣ್ ಅವರಿಗೆ ಈಗಾಗಲೇ ಟಿಕೆಟ್ ಕೊಟ್ಟಿದ್ದೇವೆ. ಅವರು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಇಬ್ಬರ ಹೆಸರು ಕಳುಹಿಸಲಾಗಿತ್ತು. ಆದ್ರೆ ಇಬ್ಬರಿಗೆ ಟಿಕೆಟ್ ಕೊಡಲು ಆಗಲ್ಲ. ಹೀಗಾಗಿ, ಒಬ್ಬರಿಗೆ ಕೊಡಲಾಗಿದೆ. ಅವರ ಮನವೊಲಿಸಲಾಗುವುದು ಎಂದು ಹೇಳಿದರು.
ಶಿಗ್ಗಾಂವಿ ಉಪಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಬಿಜೆಪಿಯವರು ಒಳ ಒಪ್ಪಂದ ಮಾಡಿಕೊಳ್ತಾರಾ? ಅವರು ಸೋಲಲು ಅವರೇ ಕಾರಣವಾಗ್ತಾರೆ. ಕಳೆದ ಬಾರಿ 68 ಸಾವಿರ ಮತ ಪಡೆದಿದ್ರು. ಎದುರಾಳಿ ಇಲ್ಲದೇ ಮತ ತಗೊಂಡ್ರಾ? ಬೊಮ್ಮಾಯಿ ಗೆದ್ದಿರಬಹುದು. ಆದರೆ, ನಮ್ಮಅಭ್ಯರ್ಥಿ ಒಳ್ಳೆಯ ಫೈಟ್ ಕೊಟ್ಟಿದ್ದಾರೆ. ಲೋಕಸಭಾದಲ್ಲಿ ಏಕೆ ನಮಗೆ ಅಲ್ಲಿ ಲೀಡ್ ಬಂದಿದೆ? ಬೊಮ್ಮಾಯಿ ಕ್ಷೇತ್ರದಲ್ಲೇ ನಮಗೆ ಹೆಚ್ಚು ಮತ ಬಂದಿದೆ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸರ್ಮಥರು. ನಮಗೆ ಭರತ್ ಬೊಮ್ಮಾಯಿ ಸಮರ್ಥ ಎದುರಾಳಿ ಅಲ್ಲವೇ ಅಲ್ಲ. ಈ ಬಾರಿ ಕೂಡ ನಮಗೆ ಲೀಡ್ ಬರಲಿದೆ ಎಂದರು.
ಎಸ್.ಟಿ.ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅದರ ಬಗ್ಗೆ ಅವರನ್ನೇ ಕೇಳಿ ಎಂದು ಹೇಳಿದರು.
ಅಂಜಲಿ ಅಂಬಿಗೇರ್ ಅವರ ಕುಟುಂಬಕ್ಕೆ ಚೆಕ್ ವಿತರಣೆ ಮಾಡಲಾಗಿದೆ. ಐದು ಲಕ್ಷದ ಚೆಕ್ ನೀಡಿದ್ದೇವೆ. ಅವರಿಗೆ ಒಂದು ಮನೆಯನ್ನೂ ಕೂಡ ಸರ್ಕಾರದಿಂದ ಮಂಜೂರು ಮಾಡಲಾಗುವುದು ಎಂದರು.
ಇತ್ತೀಚಿಗೆ ನಗರದಲ್ಲಿ ಕೊಲೆಯಾದ ಯುವತಿ ಅಂಜಲಿ ಅಂಬಿಗೇರ್ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಐದು ಲಕ್ಷ ರೂಪಾಯಿ ಚೆಕ್ ವಿತರಿಸಿದರು. ಚೆಕ್ ಪಡೆದು ಮಾತನಾಡಿದ ಅಂಜಲಿ ಸಹೋದರಿ, ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗ್ತಾರಂತ ಮೊದಲೇ ಗೊತ್ತಿತ್ತು, ನಮ್ಮ ಅಭ್ಯರ್ಥಿಯೇ ಗೆಲ್ಲುವುದು: ಸಿಎಂ