ಬೆಂಗಳೂರು: ಎದೆಹಾಲನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಎದೆ ಹಾಲಿನ ವಾಣಿಜ್ಯೀಕರಣವನ್ನು ತಡೆಯುವಂತೆ ಕೋರಿ ಮುನೇಗೌಡ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠಕ್ಕೆ ಕೇಂದ್ರ ಸರ್ಕಾರದ ವಕೀಲರು ಮಾಹಿತಿ ನೀಡಿದರು.
''ಕೇಂದ್ರ ಆಯುಷ್ ಸಚಿವಾಲಯ ಇತ್ತೀಚೆಗೆ ಕರ್ನಾಟಕ ಸರ್ಕಾರಕ್ಕೆ ಖಾಸಗಿ ಕಂಪನಿಗಳಿಗೆ ಎದೆಹಾಲು ಸಂಗ್ರಹಕ್ಕೆ ಅನುಮತಿಸಿ ನೀಡಿರುವ ಪರವಾನಗಿಗಳನ್ನು ರದ್ದುಗೊಳಿಸಬೇಕೆಂದು ನಿರ್ದೇಶನ ನೀಡಿದೆ. ಜೊತೆಗೆ, ರಾಜ್ಯಗಳು ನೀಡಿರುವ ಅಂತಹ ಪರವಾನಗಿಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸೂಚಿಸಿದೆ, ಕೆಲವು ಖಾಸಗಿ ಕಂಪನಿಗಳು ಆಯುಷ್ ನಿಯಮಗಳಡಿ ಎದೆಹಾಲನ್ನು ವಾಣಿಜ್ಯೀಕರಣಗೊಳಿಸಲು ಪರವಾನಗಿ ಪಡೆದುಕೊಂಡಿದೆ. ಆದರೆ ಇದೀಗ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದೆ ಮತ್ತು ರಾಜ್ಯಗಳಿಗೆ ಈಗಾಗಲೇ ನೀಡಿರುವ ಲೈಸನ್ಸ್ಗಳನ್ನು ರದ್ದುಗೊಳಿಸಲು ಸೂಚಿಸಿದೆ. ಈಗಾಗಲೇ ಒಂದು ಕಂಪನಿಯ ಲೈಸನ್ಸ್ ರದ್ದಾಗಿದ್ದು, ಆ ಕಂಪನಿ ಅದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ'' ಎಂದು ವಕೀಲರು ತಿಳಿಸಿದರು.
ಇದನ್ನೂ ಓದಿ: ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ: 97 ಆರೋಪಿಗಳಿಗೆ ಜಾಮೀನು ಮಂಜೂರು
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ''ಎದೆಹಾಲಿನ 50 ಎಂಎಲ್ ಬಾಟಲ್ ಹಾಗೂ 10 ಗ್ರಾಂ ಎದೆಹಾಲಿನ ಪೌಡರ್ ಪ್ಯಾಕೆಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅವುಗಳ ಬೆಲೆ ಅತಿ ದುಬಾರಿಯಾಗಿದೆ. ಕ್ರಮವಾಗಿ 1,239 ರೂ. ಹಾಗೂ 313 ರೂ. ನಿಗದಿ ಮಾಡಲಾಗಿದೆ. ಆ ಮೂಲಕ ಎದೆಹಾಲನ್ನು ವಾಣಿಜ್ಯೀಕರಣ ಮಾಡಿ ಖಾಸಗಿ ಕಂಪನಿಗಳು ಲಾಭ ಮಾಡಿಕೊಳ್ಳುತ್ತಿವೆ'' ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ವಾದದ ಹಿನ್ನೆಲೆಯಲ್ಲಿ ನ್ಯಾಯಾಲಯ ಆಯುಷ್ ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಅರ್ಜಿಯಲ್ಲಿ ತಿದ್ದುಪಡಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿ, ಆಯುಷ್ ಸಚಿವಾಲಯಕ್ಕೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿತು.
ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿಯಲ್ಲಿನ ಮದರಸಾ ತೆರವಿಗೆ ಜಿಲ್ಲಾಧಿಕಾರಿಗೆ ಸೂಚಿಸಲು ಕೋರಿದ ಕೇಂದ್ರ ಸರ್ಕಾರ