ಮಂಗಳೂರು: ಸಂಚರಿಸುತ್ತಿದ್ದಾಗಲೇ ಸಿಟಿ ಬಸ್ ಚಾಲಕನಿಗೆ ಶುಗರ್ ಲೋ ಆಗಿ ಕುಸಿದು ಬಿದ್ದ ಪರಿಣಾಮ ಬಸ್ ಮುಂಭಾಗದಲ್ಲಿ ಬರುತ್ತಿದ್ದ ಆಟೋ ಮತ್ತು ಕಾರಿಗೆ ಡಿಕ್ಕಿಯಾದ ಘಟನೆ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ಸಂಭವಿಸಿದೆ.
![bus accident](https://etvbharatimages.akamaized.net/etvbharat/prod-images/30-08-2024/kn-mng-01-accident-photo-7202146_30082024091731_3008f_1724989651_761.jpg)
ಮೋರ್ಗನ್ಸ್ ಗೇಟ್ - ಸ್ಟೇಟ್ಬ್ಯಾಂಕ್ ನಡುವೆ ಸಂಚರಿಸುವ ಪಿಟಿಸಿ ಎಂಬ ಖಾಸಗಿ ಬಸ್ ಗುರುವಾರ ಮಧ್ಯಾಹ್ನ ಸ್ಟೇಟ್ ಬ್ಯಾಂಕ್ ಕಡೆಗೆ ಸಂಚರಿಸುತ್ತಿತ್ತು. ಬಸ್ ಮಿಲಾಗ್ರಿಸ್ ಸ್ಟಾಪ್ನಲ್ಲಿ ನಿಂತು ಹೊರಟಿತ್ತು. ಇನ್ನೇನು ಸಿಗ್ನಲ್ ತಲುಪುತ್ತಿರುವಾಗಲೇ ಬಸ್ ಚಾಲಕ ಪೌಲ್ ಕಿರಣ್ ಲೋಬೊ (46) ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕುಸಿದು ಬಿದ್ದಿದ್ದಾರೆ.
![bus accident](https://etvbharatimages.akamaized.net/etvbharat/prod-images/30-08-2024/kn-mng-01-accident-photo-7202146_30082024091731_3008f_1724989651_150.jpg)
ಆ ಸಂದರ್ಭದಲ್ಲಿ ಬಸ್ ನಿಧಾನ ಗತಿಯಲ್ಲಿತ್ತು. ಅಲ್ಲಿಯೇ ಮುಂಭಾಗದಲ್ಲಿದ್ದ ಹಿಂದಕ್ಕೆ ತೆಗೆಯುತ್ತಿದ್ದ ಆಟೋ ಮತ್ತು ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಕಾರು ಹಾಗೂ ಬಸ್ ಮಧ್ಯೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿದೆ. ಆದರೆ, ಅದೃಷ್ಟವಶಾತ್ ಆಟೋ ಚಾಲಕ ಉಸ್ಮಾನ್ ಮತ್ತು ಆತನ ಪತ್ನಿ, ಮಗು ಹೆಚ್ಚಿನ ಅಪಾಯಗಳಿಲ್ಲದೆ ಪಾರಾಗಿದ್ದಾರೆ.
![bus accident](https://etvbharatimages.akamaized.net/etvbharat/prod-images/30-08-2024/kn-mng-01-accident-photo-7202146_30082024091731_3008f_1724989651_1097.jpg)
ಘಟನೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ. ತಕ್ಷಣ ಬಸ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾಯದಿಂದ ಪಾರಾಗಿದ್ದಾರೆ. ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![bus accident](https://etvbharatimages.akamaized.net/etvbharat/prod-images/30-08-2024/kn-mng-01-accident-photo-7202146_30082024091731_3008f_1724989651_492.jpg)
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮರಕ್ಕೆ ಕಾರು ಡಿಕ್ಕಿ - ಇಬ್ಬರು ಸಾವು, ನಾಲ್ವರಿಗೆ ಗಂಭೀರ ಗಾಯ