ಚಾಮರಾಜನಗರ: ಬೈಕ್ ಕಳ್ಳತನ ಮಾಡಿ ಹೊರ ಜಿಲ್ಲೆಗಳಿಗೆ ಮಾರಾಟ ಮಾಡುತ್ತಿದ್ದ ಸಹೋದರರನ್ನು ಬಂಧಿಸಿದ ರಾಮಪುರ ಪೊಲೀಸರು, ನಾಲ್ಕು ಬೈಕ್ ಹಾಗೂ 13 ಸಾವಿರ ರೂ. ನಗದು ವಶ ಪಡಿಸಿಕೊಂಡಿದ್ದಾರೆ. ನಂದೀಶ್ ಹಾಗೂ ಗಿರೀಶ್ ಬಂಧಿತರು.
ಕೆಲ ದಿನಗಳ ಹಿಂದೆ ಹನೂರು ತಾಲೂಕಿನ ಕೆ ಗುಂಡಾಪುರ ಗ್ರಾಮದ ಬಳಿ ವ್ಯಕ್ತಿ ಒಬ್ಬ ನಕಲಿ ಕೀ ಬಳಸಿ ಬೈಕ್ ಕಳವು ಮಾಡಲು ಯತ್ನಿಸುತ್ತಿದ್ದಾಗ ಬೈಕ್ ಮಾಲೀಕ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ 112 ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಲೋಕೇಶ್ ಅವರು ಸಿಕ್ಕಿಬಿದ್ದ ಆರೋಪಿ ನಂದೀಶ್ನನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ ಸಹೋದರ ಗಿರೀಶ್ ಜೊತೆ ಸೇರಿ ಬೈಕ್ ಕಳ್ಳತನ ಮಾಡಿ ಹೊರ ಜಿಲ್ಲೆಗಳಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ನಂತರ ಕಾನೂನು ಸುವ್ಯವಸ್ಥೆ ಸಬ್ ಇನ್ಸ್ಪೆಕ್ಟರ್ ರಾಧಾ ಹೆಚ್ಚಿನ ವಿಚಾರಣೆ ನಡೆಸಿದಾಗ ಮಲೆ ಮಹದೇಶ್ವರ ಬೆಟ್ಟ, ಕೌದಳ್ಳಿ, ಗುಂಡಾಪುರ, ಮೈಸೂರು ಸೇರಿದಂತೆ ನಾಲ್ಕು ಕಡೆ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಪೆದ್ದನಪಾಳ್ಯ ಗ್ರಾಮದಲ್ಲಿ ಕಳ್ಳತನವಾಗಿದ್ದ ಬೈಕ್ನ ಬಿಡಿ ಭಾಗಗಳನ್ನು ಮಾರಾಟ ಮಾಡಿದ್ದರಿಂದ 13 ಸಾವಿರ ಹಣವನ್ನು ಬಂಧಿತರಿಂದ ವಸೂಲಿ ಮಾಡಲಾಗಿದೆ.
ಈ ಸಂಬಂಧ ನಂದೀಶ್ ಹಾಗೂ ಗಿರೀಶ್ ಮೇಲೆ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ಕೊಳ್ಳೇಗಾಲ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಅಕ್ರಮ ಗಾಂಜಾ ಮಾರಾಟ, ಖರೀದಿ: ಪೊಲೀಸರಿಂದ 13 ಜನರ ಬಂಧನ - 13 people arrested