ಬೆಳಗಾವಿ: ಎರಡು ದಿನಗಳ ಕಾಲ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿರುವ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವದ ಅಂಗವಾಗಿ ಜಾನಪದ ಕಲಾವಾಹಿನಿಗಳ ಅದ್ಧೂರಿ ಮೆರವಣಿಗೆಗೆ ಇಂದು ಶಾಸಕ ಮಹಾಂತೇಶ ಕೌಜಲಗಿ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ಕೊಟ್ಟರು.
ಬೆಳವಡಿ ಮಲ್ಲಮ್ಮನ ಹುಟ್ಟೂರು ಶಿರಸಿ ಸಮೀಪದ ಸೋಂದಾದಿಂದ ಜಿಲ್ಲೆಯ ವಿವಿಧೆಡೆ ಸಂಚರಿಸಿ, ಬೆಳವಡಿಗೆ ಆಗಮಿಸಿದ ವೀರ ಜ್ಯೋತಿಗೆ ಪೂಜೆ ಸಲ್ಲಿಸುವುದರ ಮೂಲಕ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಬಳಿಕ ಬೆಳವಡಿ ಮಲ್ಲಮ್ಮನ ಪುತ್ಥಳಿಗೆ ಶಾಸಕ ಕೌಜಲಗಿ ಹಾಗೂ ಗಣ್ಯರು ಮಾಲಾರ್ಪಣೆ ಮಾಡಿದರು. ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಅವರು ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು.
ಕಣ್ಮನ ಸೆಳೆದ ಕಲಾತಂಡಗಳು: ಡೊಳ್ಳು ಕುಣಿತ, ಗೊಂಬೆ ಕುಣಿತ, ಕುದುರೆ ಕುಣಿತ, ಜನಪದ ವಾದ್ಯಗಳು, ನಗಾರಿ, ಚಿಟ್ಟೆಮೇಳ, ಮಹಿಳಾ ವೀರಗಾಸೆ, ನಂದಿಧ್ವಜ, ಹಲಗಿ ಮೇಳ, ಜಗ್ಗಲಗಿ, ಹಲಗೆ ವಾದನ, ಕುಂಭ ಹೊತ್ತ ನೂರಾರು ಮಹಿಳೆಯರು, ಕಥಕ್ಕಳಿ ಸೇರಿ 20ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ನೋಡುಗರ ಕಣ್ಮನ ಸೆಳೆದವು. ಮಲ್ಲಮ್ಮನ ವೇಷ ತೊಟ್ಟಿದ್ದ ಮಕ್ಕಳು ವಿಶೇಷವಾಗಿ ಗಮನ ಸೆಳೆದರು. ಮಲ್ಲಮ್ಮನ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಬೆಳವಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಖ್ಯ ವೇದಿಕೆಗೆ ಆಗಮಿಸಿ ಮುಕ್ತಾಯವಾಯಿತು.
ಬೆಳವಡಿ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರ ರಚನೆ: ಶಾಸಕ ಮಹಾಂತೇಶ ಕೌಜಲಗಿ ಮಾಧ್ಯಮದವರ ಜೊತೆ ಮಾತನಾಡಿ, ಪ್ರತೀ ವರ್ಷದಂತೆ ಬೆಳವಡಿ ಮಲ್ಲಮ್ಮನ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಉತ್ಸವ ನಿಮಿತ್ತ ಕ್ರೀಡಾಕೂಟ, ಕಲೆ, ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ. ಬೆಳವಡಿ ಮಲ್ಲಮ್ಮನ ಇತಿಹಾಸ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಉತ್ಸವವನ್ನು ಸರ್ಕಾರ ಕಡೆಗಣಿಸುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಆ ರೀತಿ ಏನಿಲ್ಲ. ಸಂಗೊಳ್ಳಿ ಉತ್ಸವದಂತೆ ಬೆಳವಡಿ ಉತ್ಸವಕ್ಕೂ 1 ಕೋಟಿ ರೂ ಅನುದಾನ ಬಂದಿದೆ. ಇಂದು ಬಜೆಟ್ ಅಧಿವೇಶನದ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಸಚಿವರಿಗೆ ಬರಲು ಸಾಧ್ಯವಾಗಿಲ್ಲ. ಭವಿಷ್ಯದಲ್ಲಿ ಮಲ್ಲಮ್ಮನ ಇತಿಹಾಸ ಬಿಂಬಿಸುವ ರಾಕ್ ಗಾರ್ಡನ್, ಪ್ರಾಧಿಕಾರ ರಚಿಸಿ, ಬೆಳವಡಿ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್.ನಾಗರಾಜ, ಗ್ರಾ.ಪಂ.ಉಪಾಧ್ಯಕ್ಷರು, ಬೆಳವಡಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿದ್ದರು.
''ಸಾಕಷ್ಟು ರೋಚಕ ಇತಿಹಾಸವನ್ನು ನಮ್ಮ ದೇಶ ಹೊಂದಿದೆ. ಸಾಕಷ್ಟು ರಾಜರು ನಾಡಿನಲ್ಲಿ ಆಳಿ ಹೋಗಿದ್ದಾರೆ. ಆದರೆ, ಅವರನ್ನು ಮೀರಿಸುವ ರಾಣಿಯರು ನಮ್ಮಲ್ಲಿದ್ದರು. ಅದರಲ್ಲಿ ಮೊದಲಿಗರು ಬೆಳವಡಿ ಮಲ್ಲಮ್ಮ. ಅಂಥ ವೀರರಾಣಿಯ ಇತಿಹಾಸವನ್ನು ಉತ್ಸವದ ಮೂಲಕ ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು. ಅದೇ ರೀತಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಮಲ್ಲಮ್ಮ ಅಧ್ಯಯನ ಪೀಠ ಸ್ಥಾಪಿಸಬೇಕು. ಅಂದಾಗ ಮಾತ್ರ ಮಲ್ಲಮ್ಮಾಜಿ ನೆನಪು ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯವಾಗುತ್ತದೆ''.- ರೋಹಿಣಿ ಬಾಬಾಸಾಹೇಬ ಪಾಟೀಲ, ಜಿ.ಪಂ. ಮಾಜಿ ಸದಸ್ಯೆ
ಇದನ್ನೂಓದಿ: ರಷ್ಯಾ ಸೇನೆಯಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ: ಚಿಕ್ಕೋಡಿಯಲ್ಲಿ ಎಸ್.ಜೈಶಂಕರ್