ಬೆಂಗಳೂರು: ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಕಳೆದ ಬಜೆಟ್ ಯುವಜನರಲ್ಲಿ ಕುಶಲತೆ ವೃದ್ಧಿಸುವ ನಿಟ್ಟಿನಲ್ಲಿ 3 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪ್ರಧಾನಮಂತ್ರಿ ಉದ್ಯೋಗ ಮೇಳ (ರೋಜ್ಗಾರ್ ಮೇಳ)ದ 2ನೇ ಹಂತದಲ್ಲಿ ದೇಶಾದ್ಯಂತ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾದ 51,000 ಯುವಜನರಿಗೆ ದೇಶದ 40 ಸ್ಥಳಗಳಲ್ಲಿ ನೇರ ನೇಮಕಾತಿ ಪತ್ರ ನೀಡುವ ಕಾರ್ಯಕ್ರಮ ಇಂದು ನಡೆಯಿತು. ಆನ್ಲೈನ್ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
![Appointment Letter Distribution](https://etvbharatimages.akamaized.net/etvbharat/prod-images/29-10-2024/kn-bng-04-prime-minister-rosegar-mela-program-hd-kumaraswamy-talk-script-7208083_29102024143150_2910f_1730192510_116.jpg)
25 ಯುವ ಜನರಿಗೆ ನೇಮಕಾತಿ ಪತ್ರ ವಿತರಿಸಿದ ನಂತರ ಮಾತನಾಡಿದ ಕೇಂದ್ರ ಸಚಿವರು, ಕೇಂದ್ರ ಸರ್ಕಾರದ 12 ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. 2047ನೇ ವರ್ಷಕ್ಕೆ ವಿಕಸಿತ ಭಾರತ್ ಗುರಿಯನ್ನು ಮುಟ್ಟಬೇಕು ಎನ್ನುವ ಛಲದೊಂದಿಗೆ ಮೋದಿ ಅವರು ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಹೆಚ್ಚು ಉತ್ತೇಜನ ಕೊಡುತ್ತಿದ್ದಾರೆ. ಅದಕ್ಕಾಗಿ ಬಜೆಟ್ನಲ್ಲಿ 3 ಲಕ್ಷ ಕೋಟಿ ಮೀಸಲಿಡಲಾಗಿದೆ. ಈ ಹಣವೂ ನೇರವಾಗಿ MSME ಗಳಿಗೆ ನೇರವಾಗಿ ಬಿಡುಗಡೆ ಆಗುತ್ತದೆ ಎಂದು ಹೇಳಿದರು.
![Appointment Letter Distribution](https://etvbharatimages.akamaized.net/etvbharat/prod-images/29-10-2024/kn-bng-04-prime-minister-rosegar-mela-program-hd-kumaraswamy-talk-script-7208083_29102024143150_2910f_1730192510_681.jpg)
ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗಳ ಅಡಿಯಲ್ಲಿ ಮೋದಿ ಅವರು, ಉದ್ಯೋಗ ಸೃಷ್ಟಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ಕೊಡುತ್ತಿದ್ದಾರೆ. ಉತ್ಪಾದನಾ ಸಂಪರ್ಕ ಉತ್ತೇಜನ ಯೋಜನೆ (PLI) ಮೂಲಕವೂ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಮುನ್ನಡೆ ಸಾಧಿಸಲಾಗುತ್ತಿದೆ. ಭಾರತವನ್ನು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸಲು ಇದು ಸಹಕಾರಿ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಂಚೆ ಇಲಾಖೆಯನ್ನು ಶ್ಲಾಘಿಸಿದ ಸಚಿವರು; ಮೊದಲ ಹಂತದ ಉದ್ಯೋಗ ಮೇಳದಲ್ಲಿ ಇಲಾಖೆಯು 30,000 ಯುವ ಜನರಿಗೆ ಉದ್ಯೋಗ ನೀಡಿದೆ. ಎರಡನೇ ಹಂತದಲ್ಲಿ 20,000 ಮಂದಿಗೆ ಉದ್ಯೋಗ ನೀಡಿದೆ ಎಂದು ಹೇಳಿದರು.
![Appointment Letter Distribution](https://etvbharatimages.akamaized.net/etvbharat/prod-images/29-10-2024/kn-bng-04-prime-minister-rosegar-mela-program-hd-kumaraswamy-talk-script-7208083_29102024143150_2910f_1730192510_58.jpg)
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ. ಸಿ.ಎನ್.ಮಂಜುನಾಥ್, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಉದ್ಯೋಗ ಮೇಳದಲ್ಲಿ ಆಯ್ಕೆಯಾಗಿರುವ 25 ಯುವಜನರಿಗೆ ಸಾಂಕೇತಿಕವಾಗಿ ಕೇಂದ್ರ ಸಚಿವರು ನೇರ ನೇಮಕಾತಿ ಪತ್ರವನ್ನು ವಿತರಿಸಿದರು.
ಇದಕ್ಕೂ ಮುನ್ನ ಪ್ರಧಾನಮಂತ್ರಿ ರೋಜ್ಗಾರ್ ಮೇಳ (ಉದ್ಯೋಗ ಮೇಳ)ದಲ್ಲಿ ಪ್ರಧಾನಮಂತ್ರಿಗಳ ಭಾಷಣವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಡಾ. ಸಿ.ಎನ್.ಮಂಜುನಾಥ್ ಮತ್ತಿತರರು ಆಲಿಸಿದರು.
ಇದನ್ನೂ ಓದಿ: ರೈಲ್ವೆ ಇಲಾಖೆಯ 60 ಸಾವಿರ ಹುದ್ದೆಗಳಿಗೆ ಕನ್ನಡದಲ್ಲಿಯೇ ಪರೀಕ್ಷೆಗೆ ಅವಕಾಶ: ವಿ ಸೋಮಣ್ಣ