ಚಿಕ್ಕೋಡಿ(ಬೆಳಗಾವಿ): ಭಾರತ ಪರಂಪರೆ, ಸಂಸ್ಕೃತಿ, ಸಮುದಾಯ ಪಂಗಡಗಳನ್ನು ಒಳಗೊಂಡಿರುವ ದೇಶ. ಇಲ್ಲಿ ಹುಟ್ಟಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಸಾವಿಗೂ ಕೂಡ ಅಷ್ಟೇ ಆದ್ಯತೆ ನೀಡಿ, ವಿಧಿ ವಿಧಾನದಂತೆ ಶವ ಸಂಸ್ಕಾರ ಮಾಡುತ್ತಾರೆ. ಆದರೆ, ಇವರ ಮಧ್ಯದಲ್ಲಿ ಶೇಗುಣಸಿ ಗ್ರಾಮದಲ್ಲಿ ಹಲವು ಜನರು ಮರಣದ ನಂತರ ಮೃತ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ದೇಣಿಗೆ ನೀಡುತ್ತಿದ್ದು, ಇಡೀ ದೇಶದ ಗಮನ ಸೆಳೆಯುತ್ತಿದೆ.
185 ದೇಹ ದಾನಕ್ಕೆ ಒಪ್ಪಿಗೆ: ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಬಹುತೇಕರು ತಮ್ಮ ಮರಣದ ನಂತರ ಶವ ಸಂಸ್ಕಾರ ಬದಲು ಇಡೀ ದೇಹವನ್ನು ವೈದ್ಯಕೀಯ ಕಾಲೇಜುಗಳಿಗೆ ದಾನ ಮಾಡಿ ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ. ಇದುವರೆಗೆ 185 ದೇಹಗಳ ದಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಇದರಲ್ಲಿ 17 ಜನ ಈಗಾಗಲೇ ಮರಣ ಹೊಂದಿದ್ದು, ಇವರುಗಳ ದೇಹವನ್ನು ವೈದ್ಯಕೀಯ ಕಾಲೇಜುಗಳಿಗೆ ಸರಬರಾಜು ಮಾಡಲಾಗಿದೆ. ಡಾ. ಮಹಾಂತೇಶ ರಾಮಣ್ಣವರ್ ಸ್ಫೂರ್ತಿ ಪಡೆದುಕೊಂಡು ಶೇಗುಣಸಿ ಗ್ರಾಮದಲ್ಲಿ ಸ್ವಯಂ ಪ್ರೇರಿತರಾಗಿ ದೇಹದಾನಕ್ಕೆ ಯುವಕರು ಅಷ್ಟೇ ಅಲ್ಲದೇ ಮಹಿಳೆಯರು ಕೂಡ ಮುಂದೆ ಬಂದಿದ್ದಾರೆ.
ಶವ ಸಾಗಣೆಗೂ ಮೊದಲು ಪೂಜಾ ಕೈಂಕರ್ಯ : "ಶೇಗುಣಸಿ ಗ್ರಾಮಸ್ಥ ಮಾಂತೇಶ್ ಸಿದ್ಧನಾಳ ಮಾತನಾಡಿ, "ಗ್ರಾಮದಲ್ಲಿ 2010ರಂದು ರಾಷ್ಟ್ರೀಯ ಬಸವ ಸೇವಾ ದಳದ ವತಿಯಿಂದ ಯೋಗಾಭ್ಯಾಸ ಕ್ಯಾಂಪ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಡಾ. ಮಹಾಂತೇಶ ರಾಮಣ್ಣವರ್ ಬಂದಿದ್ದರು. ದೇಹ ದಾನ ವಿಚಾರ ಕುರಿತು ವೈದ್ಯರು ಗ್ರಾಮಸ್ಥರಿಗೆ ತಿಳಿ ಹೇಳುತ್ತಿದ್ದಂತೆ ಸ್ಥಳದಲ್ಲೇ ಸ್ವಯಂ ಪ್ರೇರಿತವಾಗಿ 108 ಜನರು ನೋಂದಣಿ ಕಾರ್ಯವನ್ನು ಮಾಡಿದರು. ಸತ್ತ ಮೇಲೆ ದೇಹವು ಮಣ್ಣು ಬೂದಿ ಆಗುವ ಬದಲು ಇತರರಿಗೆ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ನಾವು ಈ ನಿರ್ಣಯ ಮಾಡಿದ್ದೇವೆ. ನಮ್ಮ ಕುಟುಂಬಸ್ಥರು ಗ್ರಾಮಸ್ಥರ ಒಪ್ಪಿಗೆ ಪಡೆದುಕೊಂಡು ಈ ನಿರ್ಣಯವನ್ನು ತೆಗೆದುಕೊಂಡಿದ್ದೇವೆ, ಗ್ರಾಮದಲ್ಲಿ ಹಲವರು ಈಗಾಗಲೇ ದೇಹ ದಾನ ಮಾಡಿದ್ದಾರೆ".
"ಇದರಲ್ಲಿ ಯಾವುದೇ ಜಾತಿ ಪಂಥ - ಮೇಲು ಕಿಳು ಎಂಬುದು ಇಲ್ಲ. ಇದಕ್ಕೆ ಸ್ಥಳೀಯ ಶ್ರೀಗಳು ಕೂಡ ಸಹಮತಿ ಸೂಚಿಸಿದ್ದಾರೆ. ಯಾವುದೇ ವಿರೋಧ ಕೂಡ ಇದುವರೆಗೆ ಬಂದಿಲ್ಲ. ಶವ ಸಾಗಣೆಗೂ ಮೊದಲು ನಾವು ಪೂಜಾ ಕೈಂಕರ್ಯಗಳು ನೆರವೇರಿಸಲಾಗುವುದು. ನಂತರ ಶವಗಳ ಹಸ್ತಾಂತರ ಮಾಡುತ್ತೇವೆ. ಧರ್ಮದಲ್ಲಿ ವೈದಾನಿಕತೆಯನ್ನು ಹುಡುಕಿಡಿಕೊಂಡು ಈಗಿನ ವಸ್ತು ಸ್ಥಿತಿಗೆ ಹೊಂದಿಕೊಂಡು ನಾವು ಬದಲಾವಣೆಯಾಗುವುದು ಅವಶ್ಯಕತೆ ಇದೆ. ಈ ದೇಹದಿಂದ ಇನ್ನೊಬ್ಬರಿಗೆ ಉಪಯೋಗವಾಗಲಿ ಎಂಬುದಷ್ಟೇ ನಮ್ಮ ಆಶಯವಾಗಿದೆ" ಎಂದು ಹೇಳಿದರು.