ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಮುಂದಿನ ಬಹುನಿರೀಕ್ಷಿತ ಚಿತ್ರ 'ಲಾಫಿಂಗ್ ಬುದ್ಧ'. ಭರತ್ ರಾಜ್ ನಿರ್ದೇಶನದ ಈ ಚಿತ್ರದ ಮೂಲಕ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀರ್ಷಿಕೆ ಮತ್ತು ಪೋಸ್ಟರ್ನಿಂದ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರುವ 'ಲಾಫಿಂಗ್ ಬುದ್ದ' ಚಿತ್ರದ ಹಾಡು ನಿನ್ನೆಯಷ್ಟೇ ಅನಾವರಣಗೊಂಡಿದೆ. ಗೀತೆ ರಚನೆಕಾರ ಕೆ.ಕಲ್ಯಾಣ್ ಬರೆದಿರುವ ಎಂಥಾ ಚಂದಾನೇ ಹಾಡಿಗೆ ವಿಷ್ಣು ವಿಜಯ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ತಮ್ಮ ಅನುಭವ ಹಂಚಿಕೊಂಡಿದೆ.
ಮೊದಲು ಮಾತನಾಡಿದ ರಿಷಬ್ ಶೆಟ್ಟಿ, ನನ್ನ ಅಭಿನಯದ ಹೀರೋ ಚಿತ್ರವನ್ನು ನಿರ್ದೇಶಿಸಿದ್ದ ಭರತ್ ರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ಈ ಚಿತ್ರದ ಕಥೆ ಹೇಳಿದಾಗ ಮನಸ್ಸಿಗೆ ಹತ್ತಿರವಾಯಿತು. ಪ್ರಮೋದ್ ಶೆಟ್ಟಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ನಾನು ಹಾಗೂ ನಿರ್ದೇಶಕರು ಆಯ್ಕೆ ಮಾಡಿದೆವು. ಇದೀಗ ನನ್ನಿಷ್ಟದ ಸಾಹಿತಿಗಳಲ್ಲಿ ಒಬ್ಬರಾದ ಕಲ್ಯಾಣ್ ಅವರು ಬರೆದಿರುವ ಹಾಡು ಬಿಡುಗಡೆ ಆಗಿದೆ. ಆಗಸ್ಟ್ 15ರಂದು ಟ್ರೇಲರ್ ಅನಾವರಣಗೊಳ್ಳಲಿದೆ. ಆಗಸ್ಟ್ 30ರಂದು ಚಿತ್ರ ತೆರೆಕಾಣಲಿದೆ ಎಂದು ತಿಳಿಸಿದರು.
!['Laughing Buddha' team](https://etvbharatimages.akamaized.net/etvbharat/prod-images/08-08-2024/22159141_srwefhdf.jpg)
ನಿರ್ದೇಶಕ ಭರತ್ ರಾಜ್ ಮಾತನಾಡಿ, ಪೊಲೀಸ್ ಅವರ ಕುಟುಂಬ ಹಾಗೂ ಅವರ ಭಾವನೆಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತೇಜು ಬೆಳವಾಡಿ ಸತ್ಯವತಿ ಪಾತ್ರ ನಿರ್ವಹಿಸಿದ್ದಾರೆ. ದಿಗಂತ್ ಮಂಚಾಲೆ ಅವರ ಪಾತ್ರ ಸಿನಿಮಾ ಬಿಡುಗಡೆವರೆಗೂ ಗೌಪ್ಯವಾಗಿರುತ್ತದೆ. ಭದ್ರಾವತಿ ಹಾಗೂ ಸುತ್ತಮುತ್ತಲಿನ ಸ್ಥಳದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ. ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಚೀನಾ ದೇಶದಲ್ಲಿ ಬುಡೈ ಎಂಬವನು ಒಂದು ಚೀಲದಲ್ಲಿ ಮಕ್ಕಳಿಗೆ ಬೇಕಾದ ಸಿಹಿ ಪದಾರ್ಥಗಳನ್ನು ತುಂಬಿಕೊಂಡು, ಮಕ್ಕಳನ್ನು ಹಾಗೂ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ. ನಮ್ಮ ಚಿತ್ರದ ನಾಯಕ ಗೋವರ್ಧನ ಪಾತ್ರ ಸಹ ಇದೇ ರೀತಿ ಇದೆ. ಹಾಗಾಗಿ ಲಾಫಿಂಗ್ ಬುದ್ಧ ಶೀರ್ಷಿಕೆ ಇಟ್ಟಿದ್ಧೇವೆ ಎಂದು ಮಾಹಿತಿ ಹಂಚಿಕೊಂಡರು.
!['Laughing Buddha' team](https://etvbharatimages.akamaized.net/etvbharat/prod-images/08-08-2024/22159141_jagrwehsf.jpeg)
ಇದನ್ನೂ ಓದಿ: OTTಗಳಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳಿಗೆ ಬೆಲೆ ಇಲ್ಲ: ರಿಷಬ್ ಶೆಟ್ಟಿ ಅಸಮಾಧಾನ - Rishab Shetty
ನಟ ಪ್ರಮೋದ್ ಶೆಟ್ಟಿ ಮಾತನಾಡಿ, ರಿಷಬ್ ಹಾಗೂ ಭರತ್ ರಾಜ್ ಈ ಚಿತ್ರದ ನಾಯಕ ನೀನೇ ಎಂದಾಗ ನನಗೆ ಆಶ್ಚರ್ಯವಾಯಿತು. ಈ ಚಿತ್ರಕ್ಕಾಗಿ ನಾನು ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ನಾನು ದಪ್ಪ ಆದ ತಕ್ಷಣ ಚಿತ್ರೀಕರಣ ಆರಂಭವಾಯಿತು. ಚಿತ್ರದ ನಂತರ ಇಪ್ಪತ್ಮೂರು ಕೆಜಿ ತೂಕ ಇಳಿಸಿಕೊಂಡಿದ್ದೇನೆ ಎಂದರು.
!['Laughing Buddha' team](https://etvbharatimages.akamaized.net/etvbharat/prod-images/08-08-2024/22159141_cdbgsdfsgc.jpeg)
ಇದನ್ನೂ ಓದಿ: ಕಾಂತಾರ ಸೂಪರ್ ಹಿಟ್ ಆದ್ರೂ ರಿಷಬ್ ಬಾಡಿಗೆ ಮನೆಯಲ್ಲಿದ್ದಾರೆ: ಪ್ರಮೋದ್ ಶೆಟ್ಟಿ - Pramod Shetty Interview
ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ತೇಜು ಬೆಳವಾಡಿ ತಿಳಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್ ಅವರು ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಮಾಹಿತಿ ನೀಡಿದರು. ಹಾಡಿನ ಬಗ್ಗೆ ಕೆ.ಕಲ್ಯಾಣ್ ಮಾತನಾಡಿದರು. ಚಿತ್ರದ ವಿತರಕರಾದ ಕೆ.ಆರ್.ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.