'ಬಾನದಾರಿಯಲ್ಲಿ' ಚಿತ್ರದ ಬಳಿಕ ನಟ ಗಣೇಶ್ ಅಭಿನಯಿಸುತ್ತಿರುವ ಚಿತ್ರವೇ 'ಕೃಷ್ಣಂ ಪ್ರಣಯ ಸಖಿ'. ಪೋಸ್ಟರ್ ಹಾಗು ಶೀರ್ಷಿಕೆಯಿಂದ ಸದ್ದು ಮಾಡುತ್ತಿರುವ ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಇದೀಗ ಮೊದಲ ಹಾಡು ರಿಲೀಸ್ ಆಗಿದೆ.
ನಿಶಾನ್ ರಾಯ್ ಬರೆದು ಚಂದನ್ ಶೆಟ್ಟಿ ಹಾಡಿರುವ 'ಮೈ ಮ್ಯಾರೇಜ್ ಇಸ್ ಫಿಕ್ಸ್ಡ್' ಎಂಬ ಗೀತೆ ಇತ್ತೀಚೆಗೆ ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಬಿಡುಗಡೆಯಾಯಿತು. ಸಾವಿರಾರು ಅಭಿಮಾನಿಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಅರ್ಜುನ್ ಜನ್ಯ ಸಂಗೀತವಿರುವ ಈ ಹಾಡು ಸಿನಿಮಾ ಪ್ರೇಮಿಗಳನ್ನು ಇಂಪ್ರೆಸ್ ಮಾಡುತ್ತಿದೆ.
ಈ ಕುರಿತು ನಟ ಗಣೇಶ್ ಮಾತನಾಡಿ, ''ಶ್ರೀನಿವಾಸರಾಜು ಅವರು ಫೋನ್ ಮಾಡಿ ಕಥೆ ಹೇಳಬೇಕೆಂದಾಗ ನನಗೆ ಆಶ್ಚರ್ಯವಾಯಿತು. ಅವರು ದಂಡುಪಾಳ್ಯದಂತಹ ಥ್ರಿಲ್ಲರ್ ಚಿತ್ರ ಮಾಡಿರುವ ನಿರ್ದೇಶಕರು. ನಾನು ನೋಡಿದರೆ ಪ್ರೇಮ ಕಥೆಗಳ ಹೀರೋ. ನನಗೆ ಇವರು ಯಾವ ತರಹ ಕಥೆ ಮಾಡಿರಬಹುದು ಅಂದುಕೊಂಡು ಕಥೆ ಕೇಳಿದೆ. ಅವರು ಕಥೆ ಶುರು ಮಾಡುತ್ತಾ, ನೀವು ಮದುವೆ ಗಂಡಿನ ತರಹ ಬರುತ್ತೀರಾ. ಎಂಟು ಜನ ನಾಯಕಿಯರು ಮದುವೆ ಹೆಣ್ಣಿನ ತರಹ ಸಿದ್ಧವಾಗಿರುತ್ತಾರೆ ಎಂದರು. ಆಗ ಇದು ನನ್ನ ಜಾನರ್ನ ಚಿತ್ರ ಅಂದುಕೊಂಡೆ. ಆದರೆ, ಚಿತ್ರದಲ್ಲಿ ಬರೀ ಇಷ್ಟೇ ಇಲ್ಲ. ಒಳ್ಳೆಯ ಟ್ವಿಸ್ಟ್ ಇಟ್ಟಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿದೆ'' ಎಂದು ತಿಳಿಸಿದರು.
![Golden star Ganesh Krishnam Pranaya Sakhi film My marriage is fixed song release Sandalwood Film Industry](https://etvbharatimages.akamaized.net/etvbharat/prod-images/28-05-2024/kn-bng-04-mymarriage-isfixed-anthidhare-goldenstar-7204735_27052024191807_2705f_1716817687_941.jpg)
ನಿರ್ದೇಶಕ ಶ್ರೀನಿವಾಸ್ ರಾಜು ಮಾತನಾಡಿ, ''ಇದು ಗಣೇಶ್ ಅವರಿಗಾಗಿಯೇ ಮಾಡಿರುವ ಕಥೆ. ಫ್ಯಾಮಿಲಿ ಎಂಟರ್ಟೈನರ್. ಎಲ್ಲಾ ಜನರೇಶನ್ನಿನವರಿಗೂ ಹಿಡಿಸುವ ಕಥೆಯೂ ಹೌದು. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಸುಮಧುರವಾಗಿವೆ. ಕನ್ನಡ ಚಿತ್ರರಂಗದ ಹಿರಿ ಕಿರಿ ಕಲಾವಿದರು ಸೇರಿದಂತೆ 64 ಜನ ಕಲಾವಿದರು ಅಭಿನಯಿಸಿದ್ದಾರೆ'' ಎಂದರು.
'ಕೃಷ್ಣಂ ಪ್ರಣಯ ಸಖಿ' ಗಣೇಶ್ ಅಭಿನಯದ 41ನೇ ಚಿತ್ರ. ಮಾಳವಿಕ ನಾಯರ್ ನಾಯಕಿಯಾಗಿ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.
![Golden star Ganesh Krishnam Pranaya Sakhi film My marriage is fixed song release Sandalwood Film Industry](https://etvbharatimages.akamaized.net/etvbharat/prod-images/28-05-2024/kn-bng-04-mymarriage-isfixed-anthidhare-goldenstar-7204735_27052024191807_2705f_1716817687_393.jpg)
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಶ್ರೀನಿವಾಸರಾಜು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಪರಿಶುದ್ಧ ಕೌಟುಂಬಿಕ ಕಥಾ ಹಂದರ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ ಮನವಿ ಮಾಡಿದರು.
ಗಾಯಕ ಚಂದನ್ ಶೆಟ್ಟಿ, ಹಾಡಿನಲ್ಲಿ ಅಭಿನಯಿಸಿರುವ ವಿನುತ, ಚಂದನ, ಸುಶ್ಮಿತ ಹಾಗೂ ಚಂದನ ಗೌಡ ಕಾರ್ಯಕ್ರಮದಲ್ಲಿದ್ದರು.
ಇದನ್ನೂ ಓದಿ: ಪುಷ್ಪ 2 ದಿ ರೂಲ್: ಪುಷ್ಪನ ಜೊತೆ ಸೊಂಟ ಬಳುಕಿಸಲಿದ್ದಾರಾ ತೃಪ್ತಿ ದಿಮ್ರಿ, ಜಾಹ್ನವಿ ಕಪೂರ್? - Pushpa 2 the Rule