ಪೂರ್ಣಿಯಾ: ಬಿಹಾರದಲ್ಲಿ ಬಂದೂಕು ತೋರಿಸಿ ದರೋಡೆ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಶುಕ್ರವಾರ ಪೂರ್ಣಿಯಾದಲ್ಲಿರುವ ತನಿಷ್ಕ್ ಜ್ಯುವೆಲ್ಲರಿ ಶೋರೂಂ ಒಂದರಲ್ಲಿ ಬಂದೂಕು ತೋರಿಸಿ, ಹಾಡಹಗಲೇ ಕೋಟ್ಯಂತರ ರೂಪಾಯಿ ದರೋಡೆ ಮಾಡಿರುವ ಘಟನೆ ನಡೆದಿದೆ.
7 ದುಷ್ಕರ್ಮಿಗಳಿಂದ ಕೃತ್ಯ: ಪೂರ್ಣಿಯಾ ನಗರದ ಸಹಾಯಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 7 ಮಂದಿ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಪೂರ್ಣಿಯಾ ಡಿಎಸ್ಪಿ ಪುಷ್ಕರ್ ಕುಮಾರ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, "ತನಿಷ್ಕ್ ಜ್ಯುವೆಲ್ಲರಿಯಲ್ಲಿ ದರೋಡೆ ನಡೆದಿರುವ ಬಗ್ಗೆ ಮಾಹಿತಿ ಬಂದ ಕೂಡಲೇ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಕೃತ್ಯದಲ್ಲಿ 5- 6 ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಪ್ರಾರಂಭಿಸಿದ್ದೇವೆ. ದರೋಡೆಕೋರರು ತಮ್ಮ ಬ್ಯಾಗ್ನಲ್ಲಿ ಚಿನ್ನಾಭರಣಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ" ಎಂದು ತಿಳಿಸಿದರು.
ಎರಡು ಬೈಕ್ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು: ಮಾಹಿತಿ ಪ್ರಕಾರ, ಎರಡು ಬೈಕ್ಗಳಲ್ಲಿ 6 ಜನ ಕ್ರಿಮಿನಲ್ಗಳು ಬಂದಿದ್ದರು. ಒಬ್ಬ ನಡೆದುಕೊಂಡು ಬಂದು ಶೋರೂಂ ಒಳಹೋಗಿದ್ದಾನೆ. ವಜ್ರದ ಸೆಟ್ನಲ್ಲಿ ಅಪರಾಧಿಗಳು ತಮ್ಮ ಕೈಚಳಕ ತೋರಿಸಿದ್ದು, ಎರಡು ಕೋಟಿಗೂ ಹೆಚ್ಚು ಬೆಲೆ ಬಾಳುವ ಆಭರಣ ದರೋಡೆ ಆಗಿದೆ ಎನ್ನಲಾಗುತ್ತಿದೆ. ಅಧಿಕೃತ ಅಂಕಿ - ಅಂಶಗಳು ಇನ್ನೂ ಸ್ಪಷ್ಟವಾಗಿಲ್ಲ.
ಆಭರಣ ಶೋರೂಂ ಉದ್ಯೋಗಿ ವಿವೇಕ್ ಎನ್ನುವವವರು ಮಾತನಾಡಿ, "ಮೊದಲ ಮೂರು ಜನರು ಗ್ರಾಹಕರ ಸೋಗಿನಲ್ಲಿ ಬಂದು ಆಭರಣಗಳನ್ನು ನೋಡುತ್ತಿದ್ದರು. ಸ್ವಲ್ಪ ಹೊತ್ತಲ್ಲೇ ಅವರ ಟೀಂ ಲೀಡರ್ ಒಳಗೆ ಬಂದ. ಕಾವಲುಗಾರನನ್ನು ಗುಂಡು ಹಾರಿಸಿ, ಕೊಂದ. ನಂತರ ನಮ್ಮನ್ನು ಬಂದೂಕು ಹಿಡಿದು ಮೊದಲ ಮಹಡಿಯಲ್ಲಿ ಲಾಕ್ ಮಾಡಿದರು. ಏನಾದರೂ ಮಾಡಿದರೆ, ಟ್ರಿಗರ್ ಒತ್ತಿ ಸಾಯಿಸುವುದಾಗಿ ಬೆದರಿಸಿದ್ದರು" ಎಂದು ವಿವರಿಸಿದರು.
ಪೊಲೀಸರಿಂದ ಸಿಸಿಟಿವಿ ಪರಿಶೀಲನೆ: ಪೂರ್ಣಿಯ ಎಸ್ಪಿ ಉಪೇಂದ್ರ ನಾಥ್ ವರ್ಮಾ, ಡಿಎಸ್ಪಿ ಪುಷ್ಕರ್ ಕುಮಾರ್ ಮತ್ತು ಹತ್ತಿರದ 7-8 ಪೊಲೀಸ್ ಠಾಣೆಯ ಪ್ರಭಾರಿಗಳೂ ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲ, ಅಪರಾಧಿಗಳು ನಗರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಎಲ್ಲಾ ಪೊಲೀಸ್ ಠಾಣೆಗಳನ್ನು ಅಲರ್ಟ್ ಮೋಡ್ನಲ್ಲಿ ಇರಿಸಲಾಗಿದೆ.
"ಎರಡರಿಂದ ಮೂರು ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಲೂಟಿ ಅಂಕಿಅಂಶಗಳು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಈ ಘಟನೆಯಲ್ಲಿ ಏಳು ಮಂದಿ ದುಷ್ಕರ್ಮಿಗಳು ಭಾಗಿಯಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿತ್ರಗಳ ಆಧಾರದ ಮೇಲೆ ಅವರನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ. ಪೊಲೀಸರು ಎಲ್ಲಾ ಹಂತಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅಪರಾಧಿಗಳನ್ನು ಹಿಡಿಯಲಾಗುವುದು" ಎಂದು ಡಿಐಜಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಲ್ಲಿ ಕದ್ದು ರೈಲಿನಲ್ಲಿ ಎಸ್ಕೇಪ್ ಆಗುತ್ತಿದ್ದ ಕಳ್ಳರು: ತುರ್ತು ಕಾರ್ಯಾಚರಣೆ ನಡೆಸಿ ಹಿಡಿದ ಪೊಲೀಸ್ರು! - Robbery Case