ನವದೆಹಲಿ: ಔಷಧಿಗಳ ವಿಚಾರದಲ್ಲಿ ದಾರಿ ತಪ್ಪಿಸುವ ಜಾಹೀರಾತು ನೀಡಿದ ಪತಂಜಲಿ ಕಂಪನಿಯ ಬಾಬಾ ರಾಮ್ದೇವ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ವೇಳೆ ರಾಮ್ದೇವ್ ಅವರು ನಿಯಮ ಉಲ್ಲಂಘಿಸಿದ್ದಕ್ಕೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಪತಂಜಲಿಯ ಜಾಹೀರಾತು ಕೇಸ್ನಲ್ಲಿ ಇಂದು (ಮಂಗಳವಾರ) ಕೋರ್ಟ್ ಮುಂದೆ ಬಾಬಾ ರಾಮ್ದೇವ್ ಮತ್ತು ಆಚಾಯ್ ಬಾಲಕೃಷ್ಣ ಅವರು ಖುದ್ದು ಹಾಜರಾದರು. ಈ ಹಿಂದಿನ ವಿಚಾರಣೆಯಲ್ಲಿ ಕೋರ್ಟ್ ನೀಡಿದ ನಿರ್ದೇಶಗಳನ್ನು ಪಾಲಿಸದೆ ನಿಯಮ ಮೀರಿದ್ದಲ್ಲದೇ, ತಪ್ಪಾದ ಅಫಿಡವಿಟ್ ಸಲ್ಲಿಸಲಾಗಿದೆ. ಇದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಕೇಸ್ ದಾಖಲಿಸಬಾರದೇಕೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.
ಕೋರ್ಟ್ಗೆ ಸೂಕ್ತ ರೀತಿಯ ಅಫಿಡವಿಟ್ ಸಲ್ಲಿಸಲು ಸಾಧ್ಯವಾಗಿಲ್ಲ. ಅದರಲ್ಲಿ ಬಳಸಲಾದ ಭಾಷೆ ಮತ್ತು ಪದಗಳು ಸರಿಯಿಲ್ಲ. ನೀವು ನಿಯಮಗಳನ್ನು ಉಲ್ಲಂಘಿಸಿದ್ದೀರಿ. ನಿಮ್ಮ ವಿರುದ್ಧ ಯಾಕೆ ಕೇಸ್ ದಾಖಲಿಸಿ ವಿಚಾರಣೆ ನಡೆಸಬಾರದು ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು ರಾಮ್ದೇವ್ ಮತ್ತು ಬಾಲಕೃಷ್ಣ ಪರ ವಕೀಲರಿಗೆ ಕೇಳಿತು.
ಅಫಿಡವಿಟ್ನಲ್ಲಿ ಏನೂ ಬೇಕಾದರೂ ಬರೆದು ಕೋರ್ಟ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೂಕ್ತವಲ್ಲದ ಅಫಿಡವಿಟ್ ಸಲ್ಲಿಸಿದ್ದಕ್ಕೆ ಆರೋಪಿಗಳು ಮೊದಲು ಕೋರ್ಟ್ ಮುಂದೆ ಕ್ಷಮೆ ಯಾಚಿಸಬೇಕಿತ್ತು ಎಂದು ಹೇಳಿತು. ಈ ವೇಳೆ ಪತಂಜಲಿ ಪರ ವಕೀಲರು, ಬೇಷರತ್ ಕ್ಷಮೆಯಾಚಿಸಲು ರಾಮ್ದೇವ್ ಮತ್ತು ಬಾಲಕೃಷ್ಣ ಸಿದ್ಧರಿದ್ದಾರೆ ಎಂದು ತಿಳಿಸಿದರು. ಬಳಿಕ ಬಾಬಾ ರಾಮ್ದೇವ್ ಅವರು ಬೇಷರತ್ ಆಗಿ ಕ್ಷಮೆಯಾಚಿಸಿದರು.
ಆದರೆ, ಪೀಠವು ಇದನ್ನು ನಿರಾಕರಿಸಿತು. ನಿಮ್ಮ ಕ್ಷಮೆಯಾಚನೆ ತುಟಿಯಂಚಿನ ನಡೆಯಾಗಿದೆ. ನಿಮ್ಮ ನಡೆ ಮತ್ತು ಕಾರ್ಯ ಒಂದೇ ಆಗಿರಬೇಕು. ಇದನ್ನು ನೀವು ಪಾಲಿಸದಿದ್ದಕ್ಕಾಗಿ ಕೋರ್ಟ್ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುತ್ತದೆ ಎಂದು ತಿಳಿಸಿತು.
ಇನ್ನೊಂದು ಅಫಿಡವಿಟ್ ಸಲ್ಲಿಸಿ: ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿತು. ಇದಕ್ಕೂ ಮೊದಲು, ಪತಂಜಲಿಗೆ ಮತ್ತೊಂದು ಅಫಿಡವಿಟ್ ಸಲ್ಲಿಸಲು ಸೂಚಿಸಿತು. ಜೊತೆಗೆ ಮುಂದಿನ ದಿನಾಂಕದಂದು ಮತ್ತೆ ಖುದ್ದು ಹಾಜರಾಗುವಂತೆ ತಾಕೀತು ಮಾಡಿತು.
ಇದೇ ವೇಳೆ ದಾರಿತಪ್ಪಿಸುವ ಜಾಹೀರಾತುಗಳಿಗಾಗಿ ಬಾಬಾ ರಾಮ್ದೇವ್ ಮತ್ತು ಪತಂಜಲಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಉತ್ತರಾಖಂಡ ಸರ್ಕಾರದಿಂದ ವಿವರಣೆ ಕೇಳಿದೆ. ರಾಜ್ಯ ಸರ್ಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿಲ್ಲ ಎಂದು ಪೀಠ ಹೇಳಿದೆ.
ಇದನ್ನೂ ಓದಿ: ಆಧುನಿಕ ವೈದ್ಯಕೀಯ ವ್ಯವಸ್ಥೆ ವಿರುದ್ಧ ತಪ್ಪು ದಾರಿಗೆಳೆಯುವ ಜಾಹೀರಾತು ನಿಲ್ಲಿಸಿ: ಪತಂಜಲಿಗೆ ಸುಪ್ರೀಂ ಚಾಟಿ