ಶಹರನ್ಪುರ್, ಉತ್ತರ ಪ್ರದೇಶ: ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಇಲ್ಲಿನ ರಾಮ್ಪುರ್ ಮಣಿಹರನ್ ಪೊಲೀಸ್ ಠಾಣೆಯ ಪ್ರದೇಶದಲ್ಲಿ ನಾಯಿಗಳ ಗುಂಪೊಂದು 4 ವರ್ಷದ ಮಗುವಿನ ಮೇಲೆ ದಾರುಣವಾಗಿ ದಾಳಿ ಮಾಡಿದ್ದು, ಮಗು ಮೃತಪಟ್ಟಿದೆ.
ತಂದೆ ಬಂದು ಬಿಡಿಸುವಷ್ಟರಲ್ಲಿ ಮಗು ಸಾವು: ಮಣಿಹರನ್ ಪ್ರದೇಶದ ಥಾನಾ ರಾಮ್ಪುರ್ನಲ್ಲಿನ ಮಜ್ರಾ ಕ್ವಾಜಿಪುರ್ ಗ್ರಾಮದ ವಿನಯ್ ಅವರ ಮಗ ವಿಶಾಂತ್ ಸಾವನ್ನಪ್ಪಿದ ಬಾಲಕ. ಗುರುವಾರ ವಿಶಾಂತ್ ಬಯಲಿನಲ್ಲಿ ಆಟವಾಡುತ್ತಿದ್ದಾಗ ನಾಯಿಗಳು ಹಿಂಡು ದಾಳಿ ಮಾಡಿದೆ. ಬೀದಿನಾಯಿಗಳ ದಂಡು ಬಾಲಕನ ಮೇಲೆ ಒಟ್ಟಾಗಿ ದಾಳಿ ನಡೆಸಿದ್ದರಿಂದ, ಅಳಲು ಶುರು ಮಾಡಿದ್ದಾನೆ. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆ ವಿನಯ್ ಮತ್ತು ತಾಯಿ ಸಪ್ನಾ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ನಾಯಿಗಳು ಮಗುವನ್ನು ಎಳೆದುಕೊಂಡು ಹೋಗಿದ್ದು, ಮಗುವಿನ ಮೇಲೆ ಭೀಕರ ದಾಳಿ ಮಾಡಿವೆ.
![Stray Dogs Terror in Saharanpur Dogs Mauled 4 Year Old Child to Death](https://etvbharatimages.akamaized.net/etvbharat/prod-images/20-09-2024/up-sre-01-child-dies-due-to-dog-attack-pic-up10149_20092024123537_2009f_1726815937_969.jpg)
ದಾಳಿಯ ತೀವ್ರತೆ ಎಷ್ಟಿತ್ತೆಂದರೆ?: ನಾಯಿಗಳ ದಾಳಿ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಮಗುವಿನ ಹೊಟ್ಟೆಯನ್ನು ಸೀಳಿ ಹಾಕಿ, ಕರಳುಗಳು ಹೊರ ಬರುವಂತೆ ಮಾಡಿವೆ. ಮಗುವಿನ ತಂದೆ ನಾಯಿಗಳನ್ನು ಓಡಿಸಲು ಪ್ರಯತ್ನ ಪಟ್ಟಾಗ ವಿನಯ್ ಮೇಲೆ ಕೂಡ ದಾಳಿ ಮಾಡಲು ನಾಯಿಗಳು ಮುಂದಾಗಿವೆ. ಇದರಿಂದ ಅವರೂ ಸಹ ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ಮೃತ ಮಗುವಿನ ತಂದೆ ಹೇಳಿದ್ದೇನು?: ಘಟನೆ ಕುರಿತು ಮಾತನಾಡಿರುವ ವಿನಯ್, ತಮ್ಮ ತರಕಾರಿ ತೋಟದಲ್ಲಿ ಕೆಲಸ ಮಾಡುತ್ತಿದ್ದೆವು. ಮಗು ಅಲ್ಲಿಯೇ ಸಮೀಪ ಆಡವಾಡುತ್ತಿದ್ದು, ಈ ವೇಳೆ 6-7 ನಾಯಿಗಳ ಹಿಂಡು ಮಗನ ಮೇಲೆ ದಾಳಿ ಮಾಡಿವೆ. ನಾಯಿಗಳ ದಾಳಿಗೆ ವಿಶಾಂತ್ ಜೋರಾಗಿ ಕಿರುಚಿಕೊಂಡ, ಸ್ಥಳಕ್ಕೆ ಹೋಗಿ, ಮಗುವನ್ನು ರಕ್ಷಣೆ ಮಾಡುವ ಹೊತ್ತಿಗೆ ನಾಯಿಗಳ ದಾಳಿಗೆ ಮಗು ಬಲಿಯಾಗಿತ್ತು. ಬಾಲಕನ ಅಜ್ಜ ಹಾಗೂ ಇತರರು ಕಷ್ಟ ಪಟ್ಟು ನಾಯಿಗಳನ್ನು ಓಡಿಸಿ ಮಗುವನ್ನು ರಕ್ಷಣೆ ಮಾಡುವ ಪ್ರಯತ್ನ ಪಟ್ಟಿದ್ದರು. ತಕ್ಷಣವೇ ಬಾಲಕನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮಗು ಬದುಕುಳಿಲಿಲ್ಲ ಎಂದು ತಿಳಿಸಿದರು. ಮಗುವಿನ ಸಾವು ಕುಟುಂಬ ಸದಸ್ಯರಿಗೆ ಆಘಾತ ತಂದಿದ್ದು, ಗ್ರಾಮದಲ್ಲಿ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೀದಿ ನಾಯಿ ಹಾವಳಿ ಕಡಿವಾಣಕ್ಕೆ ಡಿಸಿ ಸೂಚನೆ: ಬೀದಿ ನಾಯಿಗಳ ನಿಯಂತ್ರಣ. ಸಂತಾನಹರಣ ಮತ್ತು ಲಸಿಕೆ ನೀಡುವಂತೆ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಮುನ್ಸಿಪಲ್ ಆಡಳಿತಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟರ್ ಮನೀಶ್ ಬನ್ಸಲ್ ಸೂಚನೆ ನೀಡಿದ್ದಾರೆ. ಅಲ್ಲದೇ, ನಾಯಿಗಳ ನಿಯಂತ್ರಣ ಅಭಿಯಾನ ನಿರಂತರವಾಗಿ ನಡೆಸುವಂತೆಯೂ ಸೂಚಿಸಿದ್ದಾರೆ.
ಇದನ್ನೂ ಓದಿ: 4ನೇ ಮಗು ಕೂಡಾ ಹೆಣ್ಣಾಯಿತೆಂದು ಹಸುಗೂಸನ್ನು ನೆಲಕ್ಕೆಸೆದು ಕೊಂದ ಪಾಪಿ ತಂದೆ